Sunday, January 1, 2023

Bengaluru- The city of a thousand lakes – ಬೆಂಗಳೂರು: ಸಾವಿರ ಕೆರೆಗಳ ನಗರಿ


ಬೆಂಗಳೂರು: ಸಾವಿರ ಕೆರೆಗಳ ನಗರಿ 

ಗ್ರೀನ್‌ ಸಿಟಿ, ಉದ್ಯಾನನಗಳ ನಗರ, ಹವಾನಿಯಂತ್ರಿತ ನಗರ, ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದು ಪ್ರಖ್ಯಾತವಾಗಿರುವ ಬೆಂಗಳೂರು, ಕೆರೆಗಳ ನಗರ ಅದರಲ್ಲೂ ಸಾವಿರ ಕೆರೆಗಳ ನಗರ ಎಂಬ ಪ್ರಸಿದ್ಧಿಯನ್ನೂ ಪಡೆದಿತ್ತು. ಆದರೆ, ಅಭಿವೃದ್ಧಿಯ ಭರಾಟೆಯಲ್ಲಿ ಹೊಸ ವ್ಯಾಖ್ಯಾನಗಳು ಅಪ್ಪಿಕೊಂಡ ಬೆಂದಕಾಳೂರು, ತನ್ನ ಮೂಲ ಸ್ವರೂಪಕ್ಕೇ ಕೊಳ್ಳಿ ಇಟ್ಟುಕೊಳ್ಳುತ್ತಾ ಸಾಗಿದೆ. ಅದಕ್ಕೇ ಅಂದು ಕುಡಿಯುವ ನೀರು ಕೊಟ್ಟ ಕೆರೆಗಳು ಇಂದು ಮನುಜನ ಮಾಲಿನ್ಯದ ತಾಣಗಳಾಗಿವೆ...

ಕರ್ನಾಟಕ ರಾಜ್ಯದಲ್ಲಿ ದಶಕದ ಹಿಂದೆ 33 ಸಾವಿರ ಕೆರೆಗಳು ಇವೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿದ್ದವು. ಆದರೆ, ಈಗ ರಾಜ್ಯದಲ್ಲಿ ಒಟ್ಟು 40,521 ಕೆರೆಗಳಿವೆ. ಅಂದರೆ ಕೆರೆಗಳು ಕಳೆದುಹೋಗಿದ್ದವು. ಹುಡುಕುತ್ತಾ ಹೋದಂತೆ ಎಲ್ಲವೂ ಸಿಗುತ್ತಿವೆ. ಈಗಿರುವ 40 ಸಾವಿರ ಕೆರೆಗಳ ಒಟ್ಟು ವಿಸ್ತೀರ್ಣ 7 ಲಕ್ಷದ 52 ಸಾವಿರ ಎಕರೆ. ಅಪವಾದವೆಂದರೆ ಇದರಲ್ಲಿ 38 ಸಾವಿರ ಎಕರೆ ಒತ್ತುವರಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 837 ಕೆರೆಗಳಿವೆ ಎಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲೇ ತಿಳಿಸಿದೆ. 837 ಕೆರೆಗಳ ಒಟ್ಟು ವಿಸ್ತೀರ್ಣ, 28,264 ಎಕರೆ. ಇದರಲ್ಲಿ 4551 ಎಕರೆ ಒತ್ತುವರಿಯಾಗಿದೆ. 2145 ಎಕರೆ ತೆರವಾಗಿದೆ. ಇನ್ನು ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಪ್ರಕಾರ ಈ 837 ಕೆರೆಗಳನ್ನು ಹೊರತುಪಡಿಸಿ, 171 ಕಲ್ಯಾಣಿ, ಕುಂಟೆ, ಗೋಕಟ್ಟೆ, ಕಟ್ಟೆಗಳಿವೆ. ಅಂದರೆ ಬೆಂಗಳೂರಿನಲ್ಲಿ 1008 ಜೀವಂತ ಜಲಮೂಲಗಳಿವೆ. ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಕಟ್ಟಡಗಳಲ್ಲಿ ಮುಳುಗಿಹೋಗಿರುವ ನೂರಾರು ಕೆರೆಗಳು ಈ ಲೆಕ್ಕದಲ್ಲಿ ಇಲ್ಲ. ಅಂದರೆ, ಸಾವಿರ ಕೆರೆಗಳ ನಗರಿ ಬೆಂಗಳೂರು ಎಂಬುದು ಈಗಲೂ ಪ್ರಸ್ತುತವೇ... ಅದೇ ನಮ್ಮ ಹೆಮ್ಮೆ...

ಕಲುಷಿತ

ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ನೀಡಿರುವ ವರದಿಯಂತೆ ರಾಜ್ಯದಲ್ಲಿ 8,579 ಕೆರೆಗಳು ಕಲುಷಿತವಾಗಿವೆ. ಬೆಂಗಳೂರು ನಗರದಲ್ಲಿರುವ 837 ಕೆರೆಗಳೂ ಕಲುಷಿತ. ಅಂದರೆ ನಾವು ಕೆರೆಗಳನ್ನು ಎಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂಬುದು ಅರಿವಾಗುತ್ತದೆ.

ಏಷ್ಯಾದ ಯಾವುದೇ ನಗರ ಬೆಳೆಯದ ವೇಗದಲ್ಲಿ ಬೆಂಗಳೂರು ಬೆಳೆದಿದೆ, ಬೆಳೆಯುತ್ತಲೂ ಇದೆ. ಇಂತಹ ಅಭಿವೃದ್ಧಿ ವೇಗದಲ್ಲಿ ಪರಿಸರವನ್ನು ಲೆಕ್ಕಕ್ಕೆ ಇರಿಸಿಕೊಳ್ಳದ್ದೇ ಇಂದಿನ ಹವಾಮಾನ ವೈಪರೀತ್ಯದಂತ ಸಮಸ್ಯೆಗಳಿಗೆ ಪ್ರಮುಖ ಕಾರಣ. ಹವಾನಿಯಂತ್ರಿತ ನಗರ ಎಂಬ ಹೆಸರು ಬಂದಿದ್ದು ಸುಮ್ಮನೆ ಅಲ್ಲ. ಇಲ್ಲಿನ ಕೆರೆಗಳ ಪರಿಸರದಿಂದಲೇ ಈ ಪ್ರಖ್ಯಾತಿಯನ್ನು ನಗರ ಗಳಿಸಿದ್ದು. ಆದರೆ, ಇಂದು ಹೈಟೆಕ್‌ ಅಭಿವೃದ್ಧಿ ಕಂಡ ಕೆರೆಗಳೂ ಸೇರಿದಂತೆ ನಗರದ ಕೆರೆಗಳ ಬಳಿ ನಿಂತುಕೊಂಡರೆ ವಾಸನೆ ಸಹಿಸಲು ಸಾಧ್ಯವಿಲ್ಲದಂತಾಗಿದೆ. ಅಭಿವೃದ್ಧಿಯಾದ ಮೇಲೂ ಕೆರೆಗಳಲ್ಲಿ ಮಾಲಿನ್ಯ ದೂರವಾಗಿಲ್ಲ. ಒಳಚರಂಡಿಯ ಹೊಲಸು ಕೆರೆಗಳನ್ನು ಸೇರುವುದು ನಿಂತಿಲ್ಲ. ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ವಿಷಯದಲ್ಲಿ ಎದುರಿಸುತ್ತಿರುವ ಪ್ರಮುಖ ಅಂಶಗಳಲ್ಲಿ ಒಳಚರಂಡಿ ಕಲ್ಮಶಕ್ಕೇ ಪ್ರಥಮ ಸ್ಥಾನ.

ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರಮುಖವಾಗಿ ತೊಡಕಾಗಿರುವುದು ಎರಡು ಅಂಶಗಳು. ಒಂದು ಒತ್ತುವರಿ, ಮತ್ತೊಂದು ಮಾಲಿನ್ಯ.

ಒತ್ತುವರಿ.. 

ಕೆರೆಗಳ ಅಭಿವೃದ್ಧಿಗೆ ಹಣವಿಲ್ಲ ಎಂಬ ಸಮಸ್ಯೆ ಇಲ್ಲ. 2009–10ನೇ ಸಾಲಿನಿಂದ ರಾಜ್ಯ ಸರ್ಕಾರ ಪ್ರತಿ ವರ್ಷವೂ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ನೀಡುತ್ತಲೇ ಇದೆ. ಆದರೆ, ಕೆರೆಗಳ ಒತ್ತುವರಿ ಬೆಂಗಳೂರಿನಲ್ಲಿ ಸಹಜ ಎಂಬ ಮಾತಿದೆ. ಎಲ್ಲಿ ಕೆರೆ ಇದೆಯೋ ಅಲ್ಲೆಲ್ಲ ಒತ್ತುವರಿಯಾಗಿರುವುದು ಕಂಡುಬರುತ್ತದೆ. ಬೆಂಗಳೂರಿಗೆ ಪ್ರಥಮವಾಗಿ ಕುಡಿಯುವ ನೀರು ಕೊಟ್ಟ, ನಗರ ನಿರ್ಮಾತೃ ಕೆಂಪೇಗೌಡರು ಕಟ್ಟಿದ ಧರ್ಮಾಂಬುಧಿ ಕೆರೆಯನ್ನು ಸರ್ಕಾರವೇ ಒತ್ತುವರಿ ಮಾಡಿಕೊಂಡು ಬಸ್‌ ನಿಲ್ದಾಣ ಮಾಡಿದೆ. ಅದೇ ಇಂದಿನ ಮೆಜೆಸ್ಟಿಕ್‌. ಅದಾದ ಮೇಲೆ, ಫುಟ್‌ಬಾಲ್‌, ಹಾಕಿ, ಒಳಾಂಗಣ, ಕ್ಲಬ್‌, ರಸ್ತೆ, ಬಡಾವಣೆ ನಿರ್ಮಾಣಕ್ಕೆ ಹಲವು ಕೆರೆಗಳು ಮಾಯವಾದವು. ಇನ್ನು ಉಳಿದ ಕೆರೆಗಳಲ್ಲಿ ಅಲ್ಲಲ್ಲಿ ಖಾಸಗಿ ಒತ್ತುವರಿಯಾಗಿವೆ. ಇವುಗಳ ತೆರವು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 

ಒಳಚರಂಡಿ ಕಲ್ಮಶ

ಬೆಂಗಳೂರಿನ 93 ಕೆರೆಗಳು ಸುಮಾರು ₹500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿವೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೈಟೆಕ್‌ ಅಭಿವೃದ್ಧಿ ಕಂಡಿದ್ದರೂ, ಅದಕ್ಕೆ ಹರಿಯುವ ಒಳಚರಂಡಿ ನೀರಿಗೆ ತಡೆಹಾಕಲು ಸಾಧ್ಯವಾಗಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿ ಒಳಚರಂಡಿ ನೀರನ್ನು ರಾಜಕಾಲುವೆಯಲ್ಲೇ ಹರಿಸುತ್ತಿದೆ. ಇದು ಕೆರೆಗಳಿಗೆ ಹರಿಯುತ್ತಿದ್ದರೂ, ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಇದಕ್ಕೆ ತಡೆಹಾಕುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಲವು ಕೆರೆಗಳ ಮಧ್ಯೆಯೇ ಒಳಚರಂಡಿ ನೀರಿನ ಪೈಪುಮಾರ್ಗ ಹಾದುಹೋಗುತ್ತಿದೆ.

ಕೈಗಾರಿಕೆ ತ್ಯಾಜ್ಯ

ಕೆರೆಗಳು ಕಸ, ದ್ರವ ತ್ಯಾಜ್ಯ ಹಾಗೂ ಕೈಗಾರಿಕೆ ತ್ಯಾಜ್ಯದ ಸಮಸ್ಯೆಯಿಂದ ಹೊರತಾಗಿಲ್ಲ. ನಾಗರಿಕರು ಎಸೆಯುವ ಕಸದ ಜೊತೆಗೆ ರಾಜಕಾಲುವೆಯಿಂದ ಪ್ಲಾಸ್ಟಿಕ್‌ ಸೇರಿದಂತೆ ಹಲವು ರೀತಿಯ ಕಸ ಸೇರಿಕೊಳ್ಳುತ್ತಿದೆ. ಇನ್ನು ಕೆರೆಗಳ ಪಕ್ಕದಲ್ಲೇ ಕಸ ವಿಂಗಡಣೆ ಮಾಡಿ ಕಾಂಪ್ಯಾಕ್ಟರ್‌ಗಳಿಗೆ ತುಂಬುವುದರಿಂದ ದ್ರವ ತ್ಯಾಜ್ಯ ಕೆರೆಗಳಿಗೆ ಹರಿಯುತ್ತಿದೆ. ಕೈಗಾರಿಕೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ ಕೆರೆಗಳಿಗೇ ಹೋಗುತ್ತಿದೆ.

ಕೆರೆ ಮತ್ತು ಮಾಧ್ಯಮ..

ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಮಾಧ್ಯಮದ ಪಾತ್ರ ಮಹತ್ತರವಾಗಿಯೇ ಇದೆ ಎಂದು ಹೇಳಬೇಕು. ನಗರದಲ್ಲಿರುವ ಬಹುತೇಕ ಕೆರೆಗಳಿಗೆ ನಾಗರಿಕ ಸಂಘಗಳಿವೆ. ಇವುಗಳು ಕೆರೆ ರಕ್ಷಣೆ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಇವರು ನೀಡುವ ಮಾಹಿತಿ, ಮಾಧ್ಯಮಗಳು ನಡೆಸುವ ತನಿಖೆಗಳಿಂದ ಹಲವು ವರದಿಗಳು ಪ್ರಕಟವಾಗುತ್ತಿವೆ. ಇವುಗಳಿಂದ ಹಲವು ಕೆರೆಗಳು ಉಳಿದಿವೆ ಎಂಬುದು ಸಂತಸದ ವಿಷಯ.

Friday, August 16, 2013

Saturday, August 10, 2013

ಒತ್ತುವರಿ ಸುಳಿಯಲ್ಲಿ 46 ಕೆರೆ

ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರ ನಿರ್ಲಕ್ಷ್ಯದಿಂದ 46 ಕೆರೆಗಳು ಒತ್ತುವರಿಯ ಸುಳಿಯಲ್ಲೇ ನಲುಗುತ್ತಿವೆ. ಸಣ್ಣ ನೀರಾವರಿ ಇಲಾಖೆಯಿಂದ ಸಾಕಷ್ಟು ಬಾರಿ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವಿಗೆ ಸೂಚನೆ ಬಂದಿದ್ದರೂ ಅದನ್ನು ತಹಸೀಲ್ದಾರರು ನಿರ್ವಹಿಸುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವರ್ಷದಲ್ಲಿ 12 ಸಾವಿರ ಕೆರೆಗಳ ಸರ್ವೆ ನಡೆಸಿ, ಅವುಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ವರ್ಷಗಳಿಂದ ಕೆರೆಗಳ ಸರ್ವೆ ನಡೆದಿಲ್ಲ. ಇದಕ್ಕೆ ಕಾರಣ ಕಂದಾಯ ಇಲಾಖೆ. ತಹಸೀಲ್ದಾರರೇ ಈ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ನಡೆದರೆ ಒತ್ತುವರಿ ತೆರವಾಗುತ್ತಲ್ಲ ಎಂಬ ದೂ(ದು)ರಾಲೋಚನೆಯಿಂದ ಕಡತ ಮುಂದುವರಿಯುತ್ತಲೇ ಇಲ್ಲ.
ರಾಜ್ಯದ 33 ಸಾವಿರ ಕೆರೆಗಳ ಬಹುತೇಕ ಕೆರೆಗಳ ಸ್ಥಿತಿಯೂ ಇದೇ ರೀತಿಯಲ್ಲಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ವೆ ತಡೆ ಪ್ರಭಾವ ಅತಿಯಾಗಿದೆ. ಇದಕ್ಕೆ ಇಲ್ಲಿನ ರಾಜಕಾರಣಿಗಳು ಹಾಗೂ ಭೂದಾಹಿಗಳೇ ಕಾರಣ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊರತಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 47 ಕೆರೆಗಳ ಒಳಪಡುತ್ತವೆ. ಇದರಲ್ಲಿ ಒಂದು ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದೆ. ಉಳಿದ 46 ಕೆರೆಗಳನ್ನು ಐದಾರು ವರ್ಷಗಳಿಂದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈವರೆಗೆ ಒಂದು ಕೆರೆಯ ಅಭಿವೃದ್ಧಿಯೂ ಪೂರ್ಣಗೊಂಡಿಲ್ಲ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 46 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಇದರಲ್ಲಿ 39 ಕೆರೆಗಳು ಒತ್ತುವರಿಯಾಗಿವೆ. 148.49 ಹೆಕ್ಟೇರ್ (366 ಎಕರೆ) ಪ್ರದೇಶ ಒತ್ತುವರಿಯಾಗಿದೆ. 110.78 ಹೆಕ್ಟೇರ್ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದ್ದರೂ, ಕೆರೆಗಳಿಗೆ ಬೇಲಿ ಹಾಕುವ ಕಾರ್ಯ ಆಗಿಲ್ಲ. ಏಕೆಂದರೆ ಗಡಿ ಪ್ರದೇಶ ಗುರುತಾಗಿಲ್ಲ.
ಆನೇಕಲ್‌ನಲ್ಲೇ ಹೆಚ್ಚು: ಸಣ್ಣ ನೀರಾವರಿ ಇಲಾಖೆಗೆ ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲೇ 26 ಕೆರೆಗಳಿವೆ. ಈ ಕೆರೆಗಳ ಒಟ್ಟು ವಿಸ್ತೀರ್ಣ 1211.37 ಹೆಕ್ಟೇರ್ (2993 ಎಕರೆ). ಈ 26 ಕೆರೆಗಳ ಸರ್ವೆಯಲ್ಲೇ ಸಾಕಷ್ಟು ವಿಳಂಬವಾಗುತ್ತಿದೆ. ಕೆರೆಗಳ ಸರ್ವೆ ಕಾರ್ಯಕ್ಕೆ ಇಲಾಖೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರೂ ಇನ್ನೂ ಸರ್ವೆ ಕಾರ್ಯ ನಡೆಸಿಲ್ಲ. ಹೀಗಾಗಿ ಬೇಲಿ ನಿರ್ಮಿಸುವ ಪ್ರಥಮ ಕಾರ್ಯವೂ ಆಗಿಲ್ಲ.
ಆನೇಕಲ್ ತಾಲೂಕಿನಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆ ಹೆಚ್ಚಿರುವುದರಿಂದ ಕೆರೆಗಳ ಒತ್ತುವರಿ ಅತಿಹೆಚ್ಚಾಗಿದೆ. ಇಲ್ಲಿ ಸರ್ವೆ ಮಾಡಿದರೆ ಸಾಕಷ್ಟು ಕಟ್ಟಡಗಳು ನೆಲಸಮವಾಗಬೇಕಾಗುತ್ತದೆ. ಇದನ್ನು ತಡೆಯುವ ದೃಷ್ಟಿಯಿಂದ ಪಟ್ಟಭದ್ರ ಹಿತಾಸಕ್ತಿಗಳು ತಹಸೀಲ್ದಾರರ ಮೇಲೆ ಪ್ರಭಾವ ಬೀರುತ್ತಿವೆ. ಇದಕ್ಕೆ ತಹಸೀಲ್ದಾರ್ ಮಣಿದಿದ್ದಾರೆ. ಅದಕ್ಕೇ ಕೆರೆಗಳ ಒತ್ತುವರಿ ಹಾಗೇ ಉಳಿದುಕೊಂಡಿದೆ ಎಂಬ ಆರೋಪ ಬಲವಾಗಿದೆ.

ಬೆಂ.ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳು
ಪೂರ್ವ ತಾಲೂಕು: ರಾಂಪುರ ಕೆರೆ, ಬಿದರಹಳ್ಳಿ ಕೆರೆ, ದೊಡ್ಡಗುಬ್ಬಿ ಕೆರೆ, ಕೊಡತಿ ಕೆರೆ, ಎಲೆಮಲ್ಲಪ್ಪಶೆಟ್ಟಿ ಕೆರೆ.
ಉತ್ತರ ತಾಲೂಕು: ಸಿಂಗನಾಯಕನಹಳ್ಳಿ ಕೆರೆ, ಬಾಗಲೂರು ಕೆರೆ, ದೊಡ್ಡಜಾಲ ಕೆರೆ, ಆಲೂರು ಕೆರೆ, ಬಂಡೆಕೊಡಗಿಹಳ್ಳಿ ಕೆರೆ, ಅಡ್ಡೆ ವಿಶ್ವನಾಥಪುರ ಕೆರೆ, ಮಹದೇವಕೊಡಿಗೆಹಳ್ಳಿ ಕೆರೆ, ಸೊಂಡೆಕೊಪ್ಪ ಕೆರೆ, ಕಾಚಕನಹಳ್ಳಿ ಕೆರೆ.
ದಕ್ಷಿಣ ತಾಲೂಕು: ಚಿಕ್ಕಲಿಂಗಶಾಸ್ತ್ರಿ ಕೆರೆ, ಗುಳಕಮಲೆ ಕೆರೆ, ವಡೇರಹಳ್ಳಿ ಕೆರೆ, ಊದಿಪಾಳ್ಯ ಕೆರೆ, ಅಗರ ಕೆರೆ.
ಆನೇಕಲ್ ತಾಲೂಕು:  ಮುತ್ತನಲ್ಲೂರು ಅಮಾನಿ ಕೆರೆ, ಕರ್ಪೂರ ಕೆರೆ, ಬಿದರಗುಪ್ಪೆ ಅಮಾನಿ ಕೆರೆ, ಮಾಯಸಂದ್ರ ದೊಡ್ಡ ಕೆರೆ, ಮುಗಳೂರು ಕೋಡಿ ಕೆರೆ, ಮರಸೂರು ದೊಡ್ಡ ಕೆರೆ, ಅರೆಹಳ್ಳಿ ದೊಡ್ಡ ಕೆರೆ, ಸರ್ಜಾಪುರ ಕೆರೆ, ಪಂಡಿತನ ಅಗ್ರಹಾರ ಕೆರೆ, ಬೊಮ್ಮಸಂದ್ರ ಕೆರೆ, ಗಟ್ಟಿಹಳ್ಳಿ ಬೊಮ್ಮನಕೆರೆ, ಹುಸ್ಕೂರು ಕೆರೆ, ಸಿಂಗೇನಹಳ್ಳಿ ಅಗ್ರಹಾರ ಕೆರೆ, ಸರ್ಜಾಪುರ ಚಿಕ್ಕಕೆರೆ, ಬೊಮ್ಮುಂಡಹಳ್ಳಿ ಕೆರೆ, ಹೆನ್ನಾಗರ ಅಮಾನಿ ಕೆರೆ, ಬ್ಯಾಟರಾಯನದೊಡ್ಡಿ ಕೆರೆ, ಹುಲಿಮಂಗಲ ಕೆರೆ, ಸಕಲವಾರ ಭುಜಂಗದಾಸನ ಕೆರೆ, ಬಿದರಿ ಅಮಾನಿ ಕೆರೆ, ಜಿಗಣಿ ದೊಡ್ಡ ಕೆರೆ, ಹಾರಗದ್ದೆ ದೊಡ್ಡ ಕೆರೆ, ಬಗ್ಗನದೊಡ್ಡಿ ಕೆರೆ, ಆನೇಕಲ್ ರಾಜನಕೆರೆ, ಆನೇಕಲ್ ದೊಡ್ಡಕೆರೆ, ಬಿದರಕೆರೆ ದೊಡ್ಡಕೆರೆ.

ಕೆರೆಗಳ
ಸರ್ವೆಗೆ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಸರ್ವೆ ನಡೆದ ಮೇಲೆ ಅವರೇ ಒತ್ತುವರಿ ತೆರವುಗೊಳಿಸಿಕೊಡಬೇಕು. ಕೆರೆಗಳಿಗೆ ಕಲುಷಿತ ನೀರು- ತ್ಯಾಜ್ಯ ಸೇರದಂತೆ ತಡೆಗಟ್ಟಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
- ಶಿವರಾಜ್ ಎಸ್. ತಂಗಡಗಿ, ಸಣ್ಣ ನೀರಾವರಿ ಸಚಿವ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 10-08-2013