Tuesday, October 27, 2009

ಕೆಂಪಾಂಬುಧಿ ಕೆರೆ ಏರಿ ಮೇಲೆ...

ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಏರಿ ಮೇಲೆ ಮೊನ್ನೆ ಶುಕ್ರವಾರ ಅಂದರೆ, ಅಕ್ಟೋಬರ್ 23ರಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆಯಾಗಿತ್ತು. "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಎಂಬ ಶೀರ್ಷಿಕೆಯಡಿ ಕೆರೆಯ ಸಂರಕ್ಷಣೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ಜತೆಗೆ ಸ್ಥಳೀಯ ಶಾಸಕರಿಂದ ಕೆರೆ ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂದು ಕೇಳುವ ಪ್ರಶ್ನೆಯ ವೇದಿಕೆಯನ್ನೂ ಸೃಷ್ಟಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸ್ನೇಹ ಚೈತನ್ಯ ಸಾಮಾಜಿಕ ಟ್ರಸ್ಟ್ ಹಾಗೂ ಪ್ರಗತಿ ಪರ ಮಹಿಳಾ ಸಮಾಜ ಆಯೋಜಿಸಿದ್ದರಿಂದ ಮಹಿಳೆಯರೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆರೆ ಸಂರಕ್ಷಣೆಗೆ ಮಹಿಳೆಯರೇ ಬೇಕು. ಅವರಲ್ಲಿರುವ ಕಾಳಜಿ ಹಾಗೂ ಮನೆಯಲ್ಲಿ ನೀರು ಬರಲಿಲ್ಲವೆಂದರೆ ಅವರೇ ಪಾಡು ಪಡಬೇಕಾದ್ದು ಅಲ್ಲವೆ?
ಕೆಂಪೇಗೌಡ ಮನೆತನದವರು ಕಟ್ಟಿಸಿದ ಕೆರೆ ಕೆಂಪಾಂಬುಧಿ ಕೆರೆ. ಪಾಳೇಗಾರರ ವಂಶಸ್ಥರಾದ ಕೆಂಪಮ್ಮನವರ ಹೆಸರು ಈ ಕೆರೆಗಿತ್ತು. ಕೆಂಪಮ್ಮ ಕೆರೆ ಕಾಲ ಕಳೆದಂತೆ ಕೆಂಪಾಂಬುಧಿ ಆಯಿತು. ಕುಡಿಯುವ ನೀರು ಪೂರೈಸುತ್ತಿದ ಕೆರೆ ಇಂದು, ವಿಷಾನಿಲ ಸೂಸುತ್ತಿದೆ. ಕೆರೆಯ ಅಂಗಳದಲ್ಲಿ ಓಡಾಡುವುದೂ ಕಷ್ಟಕರವಾಗಿದೆ. 1983ರಿಂದಲೂ ಈ ಕೆರೆಯ ಅಭಿವೃದ್ಧಿ ಆಗುತ್ತಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಅಂದರೆ, ಎಷ್ಟು ಕೋಟಿ ರೂ. ಕೆರೆಗೆ ಚೆಲ್ಲಿದ್ದಾರೆ ಯೋಚಿಸಿ! ಆದರೂ ಈ ಕೆರೆ ಅಭಿವೃದ್ಧಿ ಆಗಿಲ್ಲ. ಈಗ ಮತ್ತೆ ೮ ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಂದರೆ ನಮ್ಮ ಹಣ ಹೇಗೆ ವ್ಯಯ ಆಗುತ್ತಿದೆ ನೋಡಿ. ಇದನ್ನು ನಾವು ಎದ್ದು ನಿಂತು ಕೇಳಲಿಲ್ಲವೆಂದರೆ ಅದೆಲ್ಲದರ ಹೊರೆ ನಮ್ಮ ಮೇಲೇ ಬೀಳುತ್ತದೆ.
ಕುಡಿಯುವ ನೀರು ಕೊಡಿ ಎಂದು ಜನಪ್ರತಿನಿಧಿಗಳ ಮೇಲೆ ಒತ್ತಾಯ ಮಾಡುತ್ತೇವೆ. ಆದರೆ, ಸ್ಥಳೀಯ ವಾತಾವರಣ ಹೇಗಿದೆ? ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಾವೇರಿ ನೀರು ಸಾಲುತ್ತಿಲ್ಲ ಎಂದರೆ, ಬೋರ್‌ವೆಲ್ ಹಾಕಿಬಿಡಿ. ಟ್ಯಾಂಕ್ ಕಟ್ಟಿಸಿ, ಅಲ್ಲಿಂದ ನೀರು ತೆಗೆದುಕೊಳ್ಳುತ್ತೇವೆ ಎಂಬುದು ಸಲಹಾತ್ಮಕ ಒತ್ತಾಯವಾಗಿರುತ್ತದೆ. ಆದರೆ, ಸುತ್ತಮುತ್ತಲಿನ ಪರಿಸರ ಉತ್ತಮವಾಗಿಲ್ಲದಿದ್ದರೆ ಬೋರ್‌ವೆಲ್‌ನಲ್ಲಿ ಒಳ್ಳೆ ನೀರು ಎಲ್ಲಿಂದ ಬರುತ್ತೆ? ಅಂತರ್ಜಲ ಮೂಲವಾಗಿರುವ ಕೆರೆಗಳಲ್ಲಿ ತ್ಯಾಜ್ಯ, ರಾಸಾಯನಿಕ ಅಂಶ, ಕೊಳಕೇ ಇದ್ದರೆ, ಅದೇ ಬೋರ್‌ವೆಲ್‌ನಲ್ಲೂ ಬರುತ್ತದೆ. ಇದು ಎಲ್ಲರ ಗಮನದಲ್ಲಿರಲಿ.
ಅಂದಹಾಗೆ, ಈ ಕಾರ್ಯಕ್ರಮ ಮಧ್ಯಾಹ್ನ 3.3-0ಕ್ಕೆ ಆಯೋಜನೆಯಾಗಿತ್ತು. ಸಮಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಬರಲಿಲ್ಲ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ತನಿಖೆಗೆ ಕೇಂದ್ರದ ತಂಡ ಆಗಮಿಸಿದ್ದರಿಂದ ಅದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಸಚಿವರು ಬರಲಿಲ್ಲವಂತೆ. ಅದರಿಂದ ಕಾರ್ಯಕ್ರಮ ಆರಂಭ ತಡವಾಯಿತು. ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಕೂಡ ತಡವಾಗಿಯೇ ಬಂದರು. ಆದರೆ, ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಸರಿಯಾದ ಸಮಯಕ್ಕೆ ಹಾಜರಿದ್ದರು.
ಕೆರೆ ಸಂರಕ್ಷಣೆಗೆ ಅಲ್ಲಲ್ಲಿ ಆಯಾ ಸ್ಥಳೀಯ ಸಂಘ-ಸಂಸ್ಥೆಗಳು ಟೊಂಕಕಟ್ಟಿ ನಿಂತರೆ, ಏನು ಅಭಿವೃದ್ಧಿ ಆಗುತ್ತಿದೆ ಎಂದು ಪ್ರಶ್ನಿಸಿದರೆ ಬೇಕಾಬಿಟ್ಟಿಗೆ ತಡೆಬೀಳುತ್ತದೆ. ಇಂತಹ ಪ್ರಯತ್ನ ಅಲ್ಲಲ್ಲಿ ಆಗಲಿ.
ವಾಹನಗಳಿಗೇ ಹೆಚ್ಚು ಕಾವೇರಿ ನೀರು ಬಳಕೆ
ನೂರಾರು ಕಿಲೋಮೀಟರ್ ದೂರದಿಂದ ಬೆಂಗಳೂರಿಗೆ ತರುತ್ತಿರುವ ಕಾವೇರಿ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ಇತರೆ ಬಳಕೆಗೆ ಅರ್ಧಕ್ಕಿಂತ ಹೆಚ್ಚು ಬಳಕೆ ಆಗುತ್ತಿದೆಯೇ?
ಹೌದು, ಎನ್ನುತ್ತಾರೆ ಬಸವನಗುಡಿ ಶಾಸಕ ರವಿಸುಬ್ರಮಣ್ಯ. ಬೆಂಗಳೂರು ನಗರದಲ್ಲಿ ಶೇ.೫೦ಕ್ಕೂ ಹೆಚ್ಚು ಕಾವೇರಿ ನೀರು ವಾಹನಗಳನ್ನು ತೊಳೆಯುವುದಕ್ಕೆ ವ್ಯಯವಾಗುತ್ತಿದೆ. ಈ ಬಳಕೆಯನ್ನು ಕಡಿಮೆ ಮಾಡದಿದ್ದರೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂಬ ಆತಂಕವೂ ಶಾಸಕರದ್ದಾಗಿದೆ.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಹಾಗೂ ಪ್ರಗತಿಪರ ಮಹಿಳಾ ಸಮಾಜದ ಸಹಯೋಗದಲ್ಲಿ ಬಸವನಗುಡಿಯ ಕೆಂಪಾಂಬುಧಿ ಕೆರೆ ಏರಿಯಲ್ಲಿ "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.
ಕೆಂಪಾಂಬುಧಿ ಕೆರೆಯನ್ನು 1983ರಿಂದಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೂ ಕೆರೆ ಶುಚಿಯಾಗಿಲ್ಲ. ಇದೀಗ ಕೆರೆಯ ಸಮಗ್ರ ಅಭಿವೃದ್ಧಿಗೆ ೮ ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಆರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಆಗುವುದಲ್ಲದೆ, ನಾಡಪ್ರಭು ಕೆಂಪೇಗೌಡರ ಕಾಲದ ಚಿತ್ರಣ ನೀಡುವ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಗರಕ್ಕೆ ಮಾದರಿ ಕೆರೆಯಾಗಿ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಚನ್ನಮ್ಮರಾಗಿ ಕೆರೆ ಉಳಿಸಿ
ಕಿತ್ತೂರು ರಾಣಿ ಚನ್ನಮ್ಮ ರೀತಿಯಲ್ಲಿ ಧೈರ್ಯವಂತರಾಗಿ ನನ್ನ ಜತೆ ಹೋರಾಡಿ. ನೂರು ಚನ್ನಮ್ಮಂದಿರು ನನ್ನೊಂದಿಗೆ ಹೋರಾಡಿದರೆ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳನ್ನೂ ಉಳಿಸುತ್ತೇನೆ ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಶ್ವಾಸನೆ ನೀಡಿದರು.
ನಿಮ್ಮ ಸಮೀಪವಿರುವ ಕೆರೆಗೆ ಯಾರಾದರೂ ಮಣ್ಣು ತುಂಬಿದರೆ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರೆ ಅವರಿಗೆ ಪೊರಕೆ ಸೇವೆ ಮಾಡಿ. ಕೆರೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ. ಯೋಜನೆ ಬಗ್ಗೆ ನಿಗಾವಹಿಸಿ, ಲೆಕ್ಕ ಪರಿಶೋಧಿಸಿ. ಇದರಿಂದ ಕೆರೆ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಮಹಾಪೋಷಕ ಸಿದ್ದೇಗೌಡ, ವಿಜಯ ಕರ್ನಾಟಕದ ಹಿರಿಯ ವರದಿಗಾರ ಆರ್. ಮಂಜುನಾಥ್, ನಿಸರ್ಗ ಪ್ರಸ್ಥಾನದ ಅಧ್ಯಕ್ಷ ಚಂದ್ರಶೇಖರ ಬಾಳೆ, ಗ್ಲೋಬಲ್ ಟೆಕ್ನಾಲಜಿಯ ಪ್ರೊ. ವೈ. ಲಿಂಗರಾಜು, ಪರಿಸರವಾದಿ ಶಿವಮಲ್ಲು, ಟ್ರಸ್ಟ್ ಅಧ್ಯಕ್ಷೆ ಶೋಭಾಗೌಡ ಹಾಗೂ ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಕಮಲ ಬಾಳೆ ಹಾಜರಿದ್ದರು.