Saturday, April 9, 2011

ಹೈಕೋರ್ಟ್ ಆದೇಶ: ಕೆರೆ ಸಂರಕ್ಷಣೆಗೆ ಅಭಯ

ಹೈಕೋರ್ಟ್ ಮಧ್ಯಪ್ರವೇಶದಿಂದ ನಗರದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆರಂಭವಾಗಿದೆ. ಕೊಳಕು, ಒತ್ತುವರಿ, ನಿರ್ಲಕ್ಷ್ಯದಿಂದ ನಲುಗಿಹೋಗಿರುವ ಕೆರೆಗಳ ಅಭಿವೃದ್ಧಿ ಮೂರು ವರ್ಷದಿಂದ ಬಹಳಷ್ಟು ಆಶ್ವಾಸನೆಗಳು ಬಂದಿದ್ದರೂ ಈಡೇರಿರಲಿಲ್ಲ. ಆದರೆ, ಈಗ ಹೈಕೋರ್ಟ್ ಸೂಚನೆಯಂತೆ ೧೮೩ ಕೆರೆಗಳು ಶುಚಿಯಾಗುವ ಲಕ್ಷಣಗಳಿವೆ.
ನಗರದಲ್ಲಿರುವ ಎಲ್ಲ ಕೆರೆಗಳನ್ನೂ ಅಭಿವೃದ್ಧಿ ಮಾಡುವುದಾಗಿ ಮೂರು ವರ್ಷದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು, ಶಾಸಕರು ಹಾಗೂ ಒಂದು ವರ್ಷದಿಂದ ಮೇಯರ್, ಕಾರ್ಪೊರೇಟರ್‌ಗಳೂ ಹೇಳುತ್ತಿದ್ದಾರೆ. ಆದರೆ, ಈವರೆಗೆ ಒಂದೇ ಒಂದು ಕೆರೆ ಅಭಿವೃದ್ಧಿಯ ದಡ ಮುಟ್ಟಿಲ್ಲ. ಕಾಮಗಾರಿಗಳು ಇನ್ನೂ ಕುಂಟುತ್ತಲೇ ಇವೆ.
ಇನ್ನು, ಕೆರೆಗಳ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರವಂತೂ ಅಭಿವೃದ್ಧಿಯನ್ನೂ ಮಾಡುವುದಿಲ್ಲ, ಮಾಡುವವರಿಗೆ ಅದನ್ನು ನೀಡುವುದೂ ಇಲ್ಲ. ಎಲ್ಲಕ್ಕೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ನಗರದ ಕೆರೆಗಳ ಅಭಿವೃದ್ಧಿಯನ್ನು ತಾನೇ ಮಾಡುತ್ತೇನೆ ಎಂದಿದ್ದ ಬಿಡಿಎ ಕೂಡ, ೧೧ ಕೆರೆ ಅಭಿವೃದ್ಧಿಯನ್ನು ಇನ್ನೂ ಮುಗಿಸಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ೨೦ ಕೆರೆ, ೨೫ ಕೆರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಲೇ ಇದೆ.
ಕಂದಾಯ ಇಲಾಖೆಯಿಂದ ನಗರ ವ್ಯಾಪ್ತಿಯ ಎಲ್ಲ ಕೆರೆಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡ ಬಿಬಿಎಂಪಿಯಂತೂ ಇತ್ತ ಗಮನವನ್ನೇ ಹರಿಸಿಲ್ಲ. ಸಾಲದ ಕೂಪದಲ್ಲಿರುವ ಪಾಲಿಕೆ ಕೆರೆಗೆ ಹಣ ಹಾಕಲು ಹಿಂದೇಟು ಹಾಕುತ್ತಿದೆ. ೧೭ ಕೆರೆಗಳು ಅಭಿವೃದ್ಧಿ ಕಾಣುತ್ತಿರುವ ಹಂತದಲ್ಲಿದ್ದರೂ, ಹಣ ಬಿಡುಗಡೆ ಮಾಡದೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ-ವಿಶೇಷ ಆಯುಕ್ತರು ಅಲೆಸುತ್ತಿದ್ದಾರೆ. ಹೀಗಾಗಿ, ನಗರದ ಕೆರೆಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ದಟ್ಟವಾಗುತ್ತಿತ್ತು. ರಾಜಕಾರಣಿಗಳಿಗೂ ಇದೇ ಬೇಕಿತ್ತು ಎಂದೆನಿಸುತ್ತದೆ. ಎಲ್ಲ ಕೆರೆಗಳು ಒಮ್ಮೆಲೆ ಅಭಿವೃದ್ಧಿಯಾದರೆ ಹೇಳಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ? ಅದಕ್ಕೇ ನಿಧಾನಗತಿಗೆ ಅಂಟಿಕೊಂಡು, ಒತ್ತುವರಿಗೆ ಉತ್ತೇಜನ ನೀಡುವಂತಿದೆ.
ಇದಕ್ಕೆಲ್ಲ ಹೈಕೋರ್ಟ್ ಸೂಕ್ತ ರೀತಿ ಚಾಟಿ ಏಟು ಬೀಸಿದೆ. ಮೂರು ತಿಂಗಳಲ್ಲಿ ನಗರದ ಎಲ್ಲ ಕೆರೆಗೆ ಗಡಿ ಗುರುತಿಸಿ, ಬೇಲಿ ಹಾಕಬೇಕು. ಹೂಳು ಎತ್ತಿ, ಒಳಚರಂಡಿ ನೀರು ಹರಿಯದಂತೆ ಶುಚಿಗೊಳಿಸಬೇಕು ಎಂದು ತಾಕೀತು ಮಾಡಿದೆ. ಅಲ್ಲದೆ, ಈ ಕಾರ್ಯದ ವರದಿಯನ್ನು ಹೈಕೋರ್ಟ್‌ಗೇ ಸಲ್ಲಿಸಬೇಕೆಂಬ ಸೂಚನೆ ಶ್ಲಾಘನೀಯ. ಇದರಿಂದಾದರೂ ಅಧಿಕಾರಿಗಳು ನಿರ್ಲಕ್ಷ್ಯಭಾವ ಬಿಟ್ಟು ಕೆಲಸ ಮಾಡುವ ಸಂಭವವಿದೆ. ಇದಕ್ಕೆಲ್ಲ ಮುಖ್ಯವಾಗಿ, ಕೆರೆಗೆ ಜಲಮೂಲವಾಗಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಒತ್ತುನೀಡಿರುವುದು. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು, ರಾಜಕಾಲುವೆ ಒತ್ತುವರಿ ತೆರವಾಗಿಲ್ಲ. ಇದೀಗ ಅದಕ್ಕೆ ಚಾಲನೆ ಸಿಗುವುದು ಜಲಮೂಲಕ್ಕೆ ಸಮಾಧಾನಕರ.
ಕೋಟ್ಯಂತರ ರೂ. ವೆಚ್ಚ ಮಾಡಿದ್ದರೂ ಒಳಚರಂಡಿ ನೀರಿನಲ್ಲೇ ಮುಳುಗಿರುವ ಕೆಂಪಾಂಬುಧಿ ಕೆರೆ.

ಕೊನೆಗೂ ಗೆದ್ದ ವೆಂಕಟಸುಬ್ಬರಾವ್

ಜಯನಗರ ಟಿ ಬ್ಲಾಕ್‌ನಲ್ಲಿರುವ ಬೈರಸಂದ್ರ ಕೆರೆಯನ್ನು ಸರಕಾರಿ ಕೆರೆ ಎಂದು ಹೈಕೋರ್ಟ್ ತೀರ್ಪು ನೀಡುವವರೆಗೆ ಛಲ ಬಿಡದೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಗೆದ್ದಿದ್ದಾರೆ. ೨೦ ವರ್ಷದಿಂದ ಬೈರಸಂದ್ರ ಕೆರೆ ಉಳಿಸಲು ಆರ್‌ಬಿಐನ ಈ ನಿವೃತ್ತ ನೌಕರ ಸಾಕಷ್ಟು ಶ್ರಮಿಸಿದ್ದಾರೆ. ಈ ಕೆರೆಯನ್ನೇ ಅಡವಿಟ್ಟು, ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡಿದ್ದರು. ಅದನ್ನು ಮರುಪಾವತಿಸದೆ ಬ್ಯಾಂಕ್ ಕೆರೆಯನ್ನು ಹರಾಜು ಹಾಕಿತ್ತು. ಬಿಬಿಎಂಪಿ ಕೆರೆ ರಕ್ಷಣೆಯಲ್ಲಿ ಎಡವಿತ್ತು. ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸಿ, ವರ್ಷಗಟ್ಟಲೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಪರಿಶ್ರಮಕ್ಕೆ ಹೈಕೋರ್ಟ್‌ನಲ್ಲಿ ಪ್ರತಿಫಲ ದೊರೆತಿದೆ. ಈ ಕೆರೆ ಸರಕಾರಿ ಕೆರೆ. ಇದನ್ನು ಯಾರೂ ಮಾರುವಂತಿಲ್ಲ, ಸಾಲ ನೀಡುವಂತಿಲ್ಲ, ಹರಾಜು ಹಾಕುವಂತಿಲ್ಲ. ಇದನ್ನು ಕೂಡಲೇ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡಿ ಎಂದು ಹೈಕೋರ್ಟ್ ನಿರ್ದೇಶಿಸಿರುವುದು ಒತ್ತುವರಿದಾರರಿಗೆ ಅಂಕುಶ ಹಾಕಿದಂತಾಗಿದೆ.
೪೩ರಲ್ಲಿ ನೀರಿಲ್ಲ, ೫೯ರಲ್ಲಿ ಮಾಲಿನ್ಯ
ಬಿಬಿಎಂಪಿಯೇ ಅಧಿಕೃತವಾಗಿ ಪ್ರಕಟಿಸಿರುವ ಪಟ್ಟಿಯಂತೆ ಬೆಂಗಳೂರಿನಲ್ಲಿ ೧೯೦ ಕೆರೆಗಳಿವೆ. ನೆನಪಿರಲಿ, ಇದರಲ್ಲಿ ಸಂಪೂರ್ಣವಾಗಿ ಒತ್ತುವರಿಯಾದ, ಬಸ್ ನಿಲ್ದಾಣ-ಆಟದ ಮೈದಾನಗಳಾಗಿ ಪರಿವರ್ತನೆಯಾಗದ ಕೆರೆಗಳು ಸೇರಿಲ್ಲ. ಈ ೧೯೦ ಕೆರೆಗಳನ್ನು ಅಭಿವೃದ್ಧಿಪಡಿಸಿ, ಜಲಮೂಲ ಹೆಚ್ಚಿಸಬಹುದಂತಹವು.
ನಗರದಲ್ಲಿ ಉಳಿದಿರುವ ೧೯೦ ಕೆರೆಗಳ ಪೈಕಿ ೪೩ ಕೆರೆಗಳಲ್ಲಿ ನೀರಿನ ಹರಿವಿಲ್ಲ. ೫೯ ಕೆರೆಗಳು ಕೊಳಕು. ಒಳಚರಂಡಿ ನೀರು ಹಾಗೂ ಮಾಲಿನ್ಯಯುಕ್ತವಾಗಿ ನಲುಗುತ್ತಿವೆ. ಅಲ್ಲದೆ, ಬಹುತೇಕ ಕೆರೆಗಳ ಗಡಿ ನಿರ್ಧಾರವಾಗಿಲ್ಲ. ಬೇಲಿ ಬಿಡಿ, ಒಂದು ಗುರುತನ್ನೂ ಹಾಕಿಲ್ಲ. ಒಂದಷ್ಟು ಒತ್ತಡ ಬಂದರೆ, ಆ ಕೆರೆಯತ್ತ ಇನ್ನೊಂದು ವರ್ಷ ತಿರುಗಿಯೂ ನೋಡುವುದಿಲ್ಲ. ಇಂಥ ಸಂದರ್ಭದಲ್ಲಿ, ಮೂರು ತಿಂಗಳ ಹೈಕೋರ್ಟ್ ಗಡುವು ಲಕ್ಷ್ಮಣರೇಖೆ. ನಗರ ಜನತೆಯ ಪಾಲಿಗೆ ಸಂತಸಸೂಚಕ.