Sunday, September 26, 2010

ತಿಪ್ಪಗೊಂಡನಹಳ್ಳಿಗೆ 3, ಹೆಸರಘಟ್ಟಕ್ಕೆ 6 ಅಡಿ ನೀರು

ನಗರ ಹಾಗೂ ಸುತ್ತಮುತ್ತ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ಸಮಸ್ಯೆ ಎದುರಾಗಿ ಬೇಸರಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ನಗರಕ್ಕೆ ಜಲಮೂಲವಾಗಿರುವ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಸಂತಸ ಮೂಡಿಸಿದೆ.
ಹೆಸರಘಟ್ಟ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 129.5 ಮಳೆ ಸುರಿದಿದ್ದು, ಶನಿವಾರವೂ ಮಳೆಯಾಗಿತ್ತು. ನೀರಿನ ಹರಿವು ಹೆಚ್ಚಾದ್ದರಿಂದ, ಹೆಸರಘಟ್ಟ ಅಣೆಕಟ್ಟೆಯಲ್ಲಿ 6 ಅಡಿ ನೀರು ತುಂಬಿದೆ. ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯಕ್ಕೆ ಇದೀಗ ಸುತ್ತಮುತ್ತಲಿನಿಂದ ಮಾತ್ರ ನೀರು ಹರಿದಿರುವುದರಿಂದ 6 ಅಡಿ ತುಂಬಿದೆ. ಇನ್ನೊಂದೆರಡು ದಿನ ಮಳೆ ಹೀಗೆ ಮುಂದುವರಿದರೆ, 10 ಅಡಿ ನೀರು ಸಂಗ್ರಹವಾಗಿ ದಾಖಲೆಯಾಗುವ ಸಾಧ್ಯತೆ ಇದೆ.
ಹೆಸರಘಟ್ಟದಲ್ಲಿ 6 ಅಡಿ ನೀರು ಬಂದಿರುವುದರಿಂದ ಆ ನೀರನ್ನು ಸರಬರಾಜು ಮಾಡಲು ಸಾಧ್ಯವೇನೂ ಇಲ್ಲ. ಆದರೆ, ಈ ಅಣೆಕಟ್ಟೆ ನೀರು ಇಲ್ಲದೆ ಸೊರಗುತ್ತಿದ್ದ ಸಂದರ್ಭದಲ್ಲಿ ಒಂದೇ ದಿನ ಸುಮಾರು ನಾಲ್ಕು ಅಡಿ ನೀರು ಬಂದಿರುವುದು ಸಂತಸಕರ ಎಂದು ಅಣೆಕಟ್ಟೆ ವ್ಯಾಪ್ತಿಯ ನೇತೃತ್ವ ವಹಿಸಿರುವ ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಟಿ. ವೆಂಕಟರಾಜು ತಿಳಿಸಿದರು.
ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಒದಗಿಸುವ ತಿಪ್ಪಗೊಂಡನಹಳ್ಳಿಗೆ ಜಲಾಶಯಕ್ಕೆ ಶುಕ್ರವಾರ ಒಂದೇ ರಾತ್ರಿ ಸುಮಾರು ಮೂರು ಅಡಿ ನೀರು ಬಂದಿದೆ. ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಶಿವಗಂಗೆಯಲ್ಲಿ ಹುಟ್ಟುವ ಅರ್ಕಾವತಿಯ ಉಪನದಿ ಕುಮುದ್ವತಿ ಹರಿವು ಹೆಚ್ಚಾಗಿ ಈ ಸಂಗ್ರಹ ಸಾಧ್ಯವಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಸೆ.24 ರಂದು 13.6 ನೀರಿತ್ತು. ಸೆ.26 ಬೆಳಗ್ಗೆ ಈ ಮಟ್ಟ 13.6 ಅಡಿಗೆ ಹೆಚ್ಚಿದೆ. ಶಿವಗಂಗೆ ಸುತ್ತಮುತ್ತ ಮಳೆ ಹೆಚ್ಚಾದ್ದರಿಂದ ನೀರು ಹರಿವು ಹೆಚ್ಚಾಗಿದೆ. ಪ್ರತಿ ದಿನ 18 ದಶಲಕ್ಷ ಲೀಟರ್ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ವರುಣನ ಕೃಪೆ ಇದ್ದು ಮುಂದಿನ ಒಂದು ವಾರ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರುತ್ತದೆ. ಇದರಿಂದ ನಗರಕ್ಕೆ ಹೆಚ್ಚಿನ ನೀರು ಪೂರೈಸಬಹುದಾಗಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ನೇತೃತ್ವ ವಹಿಸಿರುವ ಜಲಮಂಡಳಿಯ ಅಪರ ಮುಖ್ಯ ಎಂಜಿನಿಯರ್ ರೂಪ್‌ಕುಮಾರ್ ತಿಳಿಸಿದರು.
ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳ ಜಲಮೂಲ ಅರ್ಕಾವತಿ ನದಿ. ಈ ನದಿ ಹರಿಸುವ ಪ್ರಯತ್ನ ಆರಂಭವಾಗಿದ್ದರೂ ಅದಕ್ಕೊಂದು ನಿರ್ದಿಷ್ಟ ರೂಪ ನೀಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಶಾಸಕ ಮುನಿರಾಜು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ಮಾಡಿ ನದಿ ಹರಿಸಲು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಸಂಸದ ಅನಂತಕುಮಾರ್ ಸೇರಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್ ಶಹಭ್ಬಾಸ್‌ಗಿರಿ ನೀಡಿ, ನದಿ ಪುನಶ್ಚೇತನದ ಭರವಸೆ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲ ಮುಗಿದು ಒಂದು ವರ್ಷವಾದರೂ ಈವರೆಗೆ ಯಾರೂ ನಿರ್ದಿಷ್ಟ ಹೆಜ್ಜೆ ಇರಿಸಿ ಕಾರ್ಯನಿರ್ವಹಿಸದಿರುವುದು ಶೋಚನೀಯ.