Monday, November 30, 2009

ಮಲ್ಲೇಶ್‌ಪಾಳ್ಯದಲ್ಲಿ ಕೆರೆ ಉಳಿಸಿ: ಅಭಿಯಾನ; ಜಾತ್ರೆ

ನಗರದಲ್ಲಿ ಹಿಂದೆ ಕೆರೆಗಳು ಧಾರ್ಮಿಕ ಆಚರಣೆಗಳ ಕೇಂದ್ರ ಬಿಂದುವಾಗಿದ್ದವು. ಇಂದು ಆಚರಣೆಗಳ ಸೊಗಡಿನಿಂದಲೇ ಕೆರೆಗಳನ್ನು ಸಂರಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ’ಕೆರೆ ಉಳಿಸಿಎಂದು ಸಾರಲು, ಊರಹಬ್ಬ, ಜಾತ್ರೆಯ ವಾತಾವರಣ ನಿಮಾರ್ಣ ವಾಗುತ್ತಿದೆ. ಮಲ್ಲೇಶಪಾಳ್ಯ ಇಂತಹ ಜಾಗೃತಿಹಬ್ಬದಲ್ಲಿ ಮಿಂದೆದ್ದಿತು.
ಬೆಂಗಳೂರಿನಲ್ಲಿ ಕೆರೆಗಳು ಅಭಿವೃದ್ಧಿ ಆಗುತ್ತಿರುವುದು ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿ ಮನಸ್ಸಿಗೂ ಆಹ್ಲಾದ ಉಂಟು ಮಾಡುತ್ತದೆ. ಇಂತಹ ಯೋಜನೆಗಳು ಅಲ್ಲಲ್ಲಿ ಆರಂಭವಾಗುತ್ತಿರುವುದು ಸಂತಸಕರ. ಅದರಲ್ಲೂ ಒಂದು ಕೆರೆ ಅಭಿವೃದ್ಧಿಗೆ ಊರ ಸಂಸ್ಕೃತಿಯನ್ನು ಸಾರುವ ಮೆರವಣಿಗೆ ಮಾಡುವುದು ಶ್ಲಾಘನೀಯ. ಇದು ಊರಹಬ್ಬದ ಆಚರಣೆ ಆಗಬೇಕು. ಪ್ರತಿಯೊಂದು ಕೆರೆಯಲ್ಲೂ ಪ್ರತಿ ತಿಂಗಳೂ ತೆಪ್ಪೋತ್ಸವ ನಡೆಯಬೇಕು. ಇದು ನಮ್ಮ ಸಂಸ್ಕೃತಿಯನ್ನು ಸಾರುವ ಉತ್ಸವಗಳು ಕೆರೆಗಳಲ್ಲೇ ಆಗಬೇಕು
ಸರ್ ಸಿ.ವಿ. ರಾಮನ್‌ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಗ್ಗದಾಸಪುರ ಮತ್ತು ಮಲ್ಲೇಶಪಾಳ್ಯ ಕೆರೆ ಅಭಿವೃದ್ಧಿಗಾಗಿ ಜಾಗೃತಿ ಜಾಥಾ ನಡೆಯಿತು. ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಬಿಡಿಎ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿವೆ. ಆದರೆ ಕಗ್ಗದಾಸಪುರ-ಮಲ್ಲೇಶಪಾಳ್ಯ ಕೆರೆಯನ್ನು ಶಾಸಕರ ನಿಧಿಯಿಂದ ಈ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಇಲ್ಲಿನ ವಿಶೇಷ.
ಊರಹಬ್ಬದಂತೆ ಮೆರವಣಿಗೆ ಮೂಲಕ ಸಾಗಿ ಶಾಸಕ ಎಸ್. ರಘು ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳ ನೃತ್ಯ, ಕೆರೆ ಉಳಿಸಿ ಎಂದು ಸಾರುವ ಸಾವಿರಾರು ಟಿಶರ್ಟ್ ಧಾರಿಗಳು ಈ ಮೆರವಣಿಗೆಯ ಹೈಲೈಟ್.
’ಕೆರೆಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ’ ಎಂಬ ಹಿರಿಯ ಮಾತನ್ನು ಅನುಸರಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ’ನಮ್ಮೂರ್ ಕೆರೆ’ ಲೇಖನ ಮಾಲಿಕೆಯಿಂದ ಕೆರೆಯ ನಿಜಸ್ಥಿತಿಯ ಅರಿವಾಯಿತು. ಕಗ್ಗದಾಸಪುರ ಕೆರೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಿಬಿಎಂಪಿ ಇದರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಇದು ಮುಂದಿನ ವರ್ಷ ಕಾರ್ಯಗತವಾಗುತ್ತದೆ. ಆದರೆ, ಈ ಕೆರೆಗೆ ಬೇಲಿ ಹಾಕಿ, ಹೂಳು ತೆಗೆಯಬೇಕಾದ್ದು ತುರ್ತುಸ್ಥಿತಿ. ಆದ್ದರಿಂದ ’ಶಾಸಕರ ನಿಧಿ’ಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್. ರಘು ತಿಳಿಸಿದರು.
ಕೆರೆಗೆ ಬೇಲಿ, ತಡೆಗೋಡೆ, ಹೂಳು ತೆಗೆಯುವುದು, ಮಾಲಿನ್ಯ ನಿಯಂತ್ರಣ, ವಾಕಿಂಗ್ ಟ್ರ್ಯಾಕ್ ಸೌಲಭ್ಯಗಳು ಮುಂದಿನ ಆರು ತಿಂಗಳಲ್ಲಿ ಸುಮಾರು 1.25 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಬಿಬಿಎಂಪಿ ವತಿಯಿಂದ ಮುಂದಿನ ಯೋಜನೆ ಕೈಗೊಂಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಲಾಗುತ್ತದೆ. ಕಗ್ಗದಾಸಪುರ ಕೆರೆಯ ದಡದಲ್ಲಿರುವ ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನದ ಅಭಿವೃದ್ಧಿಗೆ 38 ಲಕ್ಷ ಮೀಸಲಿರಿಸಲಾಗಿದೆ ಎಂದರು.
ಮಲ್ಲೇಶ್‌ಪಾಳ್ಯದಲ್ಲಿ ಬಸ್ ನಿಲ್ದಾಣ, ಈ ಬಸ್‌ನಿಲ್ದಾಣದಿಂದ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ, ಐಟಿಪಿಎಲ್‌ಗೆ ವೋಲ್ವೊ ಬಸ್ ಸೌಲಭ್ಯ ಹಾಗೂ ಹೈಮಾಸ್ಟ್ ವಿದ್ಯುತ್‌ದೀಪಗಳಿಗೆ ಶಾಸಕ ಎಸ್. ರಘು ಚಾಲನೆ ನೀಡಿದರು. ಮಲ್ಲೇಶ್‌ಪಾಳ್ಯ ಮುಖ್ಯರಸ್ತೆ ಅಗಲೀಕರಣಗೊಂಡು, ಡಾಂಬರೀಕರಣವಾಗಿದ್ದು, ಇದನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲಾಯಿತು.

Tuesday, November 10, 2009

ಬೆಂಗಳೂರಿನಲ್ಲಿ 183 ಕೆರೆ- ಇದು ಅಧಿಕೃತ...

123 ಕೆರೆಗಳಿಗೆ ಶುಕ್ರದೆಸೆ; ಭೂದಾಹಿಗಳಿಗೆ ಬೇಲಿ
ಉದ್ಯಾನನಗರಿಯಲ್ಲಿ ಗತವೈಭವದ ಇತಿಹಾಸ ಮೆಲುಕುಹಾಕುತ್ತಾ, ಬಡಕಲಾಗುತ್ತಿದ್ದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆವರಿಸಿಕೊಳ್ಳುತ್ತಿದೆ. ನಗರದಲ್ಲಿ ನೂರಾರು ಕೆರೆಗಳಿವೆಯೇ ಎಂಬ ಪ್ರಶ್ನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಉತ್ತರ ನೀಡಿದೆ. 183 ಕೆರೆಗಳು ಬಿಬಿಎಂಪಿ ಗಣನೆಗೆ ಬಂದಿದ್ದು, 123 ಕೆರೆಗಳಿಗೆ ಸದ್ಯವೇ ಬೇಲಿ ಬೀಳಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಗೆ ಚಾಲನೆ ದೊರಕಿರುವ 36 ಕೆರೆಗಳಲ್ಲದೆ, 123 ಕೆರೆಗಳ ಸರ್ವೆ ಕಾರ್ಯ ಆರಂಭವಾಗಿದೆ. ಅವುಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಿ, ಜನವರಿ ಅಂತ್ಯದೊಳಗೆ ಬೇಲಿ ಹಾಕಲಾಗುತ್ತದೆ. ಇದಕ್ಕಾಗಿ 40 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದಾರು ಕೆರೆಗಳಲ್ಲಿ ಬೇಲಿ ಕಾಮಗಾರಿಯೂ ಆರಂಭವಾಗಿದೆ.
ವಿಜಯ ಕರ್ನಾಟಕ ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು 'ನಮ್ಮೂರ್ ಕೆರೆ' ಲೇಖನ ಮಾಲಿಕೆ ಮೂಲಕ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆನಂತರ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ, ಬಿಡಿಎ ವಿಶೇಷ ಯೋಜನೆಗಳನ್ನು ರೂಪಿಸಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ 21 ಕೆರೆಗಳಿಗೆ ಕಾಯಕಲ್ಪ ನೀಡುವ ಕಾಮಗಾರಿಗೆ ಚಾಲನೆ ನೀಡಿದೆ. ಇದರಲ್ಲಿ ಪ್ರಮುಖವಾಗಿ ಒತ್ತುವರಿ ತೆರವುಗೊಳಿಸಿರುವುದು ಗಮನಾರ್ಹ. ಯಾವುದೇ ಒತ್ತುವರಿಯನ್ನು ಮನ್ನಾ ಮಾಡಬೇಡಿ ಎಂಬ ಬಿಬಿಎಂಪಿ ಆಯುಕ್ತರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಆದರೆ, ಕೆಲವೆಡೆ ಶಾಸಕರ ಒತ್ತಾಸೆಗೆ ಕೆಲವು ಒತ್ತುವರಿ ತೆರವಾಗಿಲ್ಲ. ಅಭಿವೃದ್ಧಿಯ ಪಥದಲ್ಲಿರುವ ಕೆರೆಯಲ್ಲಿ ಹೂಳು ತೆಗೆದು, ಬೇಲಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಮುನ್ನ ಅಲ್ಲಿನ ಒತ್ತುವರಿಗೆ ಪ್ರಥಮವಾಗಿ ಅಂತ್ಯ ಹಾಡಲಾಗುತ್ತದೆ. ಇದರಿಂದ ಬಡಾವಣೆಗಳಿಗಾಗಿ ಕೆರೆಗಳನ್ನು ನುಂಗಿಕೊಂಡಿದ್ದ ಭೂದಾಹಿಗಳಿಗೆ ಹಿನ್ನಡೆ ಆಗಲಿದೆ. ಅಷ್ಟೇಅಲ್ಲ, ಹೊಸ ಒತ್ತುವರಿಗೂ ಕಡಿವಾಣ ಬೀಳಲಿದೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕೆರೆಗಳ ಸಮೀಕ್ಷೆ ಕಾರ್ಯ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ, ಲಾಲ್‌ಬಾಗ್, ಅಗರ, ಹೆಬ್ಬಾಳ, ಹಲಸೂರು, ಕೆಂಪಾಂಬುಧಿ, ಯಡಿಯೂರು, ಸ್ಯಾಂಕಿ, ಹೆಣ್ಣೂರು, ಕೆಂಗೇರಿ, ವಸಂತಪುರ, ಹಲಗೆವಡೇರಹಳ್ಳಿ ಕೆರೆ ಸೇರಿದಂತೆ 25 ಕೆರೆಗಳನ್ನು ಬಿಡಿಎ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿವೆ. ಬಿಬಿಎಂಪಿ 21 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದೆ. ಬಿಡಿಎ ತನ್ನ ವ್ಯಾಪ್ತಿಯ 12 ಕೆರೆಗಳಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಅಮೃತಹಳ್ಳಿ ಹಾಗೂ ಜಕ್ಕೂರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಉಳಿದ 123 ಕೆರೆಗಳಿಗೆ ಬಿಬಿಎಂಪಿ, ಒತ್ತುವರಿ ತೆರವುಗೊಳಿಸಿ ಬೇಲಿ ಹಾಕುವ ಕಾರ್ಯವನ್ನು ಆರಂಭಿಸಿದೆ.
ನಗರದ 11 ವಿಧಾನಸಭೆ ವ್ಯಾಪ್ತಿಯಲ್ಲಿರುವ ಈ 123 ಕೆರೆಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಇದರಲ್ಲಿ 50 ಕೆರೆಗಳ ಸರ್ವೆ ಮುಗಿದಿದ್ದು, ಉಳಿದ್ದದ್ದು ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ಎಲ್ಲ ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಜನವರಿ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಲಿದೆ.
ಬೆಳ್ಳಂದೂರು, ಅಟ್ಟೂರು, ಕಲ್ಕೆರೆ, ಚಿನ್ನಪ್ಪನಹಳ್ಳಿ, ವರ್ತೂರು ಕೆರೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇಲ್ಲಿ ಬೇಲಿ ಹಾಕುವ ಕಾರ್ಯ ಆರಂಭವಾಗಿದ್ದು, ಅಂಗಳದಲ್ಲಿ ಸಸಿ ನೆಡಲಾಗುತ್ತಿದೆ. ಮಳೆ ನೀರು ಕೆರೆಗಳಿಗೆ ಹರಿಯಲು ರಾಜಾಕಾಲುವೆಗಳ ತೆರವುಗೊಳಿಸಲಾಗುತ್ತಿದೆ.
ಕೆರೆಗಳಲ್ಲಿ ಔಷಧ ಸಸ್ಯ
ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿರುವ ಕೆರೆಗಳ ಅಂಗಳದಲ್ಲಿ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನಡೆಲಾಗುತ್ತಿದೆ. ಇದಕ್ಕಾಗಿ 16 ಸಸ್ಯಗಳನ್ನು ಗುರುತಿಸಲಾಗಿದೆ. ಅಮೃತಬಳ್ಳಿ, ಮಾವು, ಬಜೆ, ಆಡುಸೊಗೆ, ಲಾವಂಚಾ, ಭೃಂಗರಾಜ, ದಾಸವಾಳ, ಚಕ್ರಮುಖಿ, ಬಿಳೀ ಲಕ್ಕಿ ಸಸ್ಯಗಳು ಇದರಲ್ಲಿ ಸೇರಿವೆ.
ಬೆಂಗಳೂರಿನಲ್ಲಿ ಎಂಬತ್ತೇ ಕೆರೆಗಳಿರುವುದು ಎಂದು ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳು, ಇದೀಗ ಎಚ್ಚೆತ್ತುಕೊಂಡಿದ್ದಾರೆ. ಅದಕ್ಕೇ 183 ಕೆರೆಗಳು ಕಾಣಿಸಿಕೊಂಡಿವೆಯಲ್ಲದೆ, ಲೆಕ್ಕಕ್ಕೂ ಸಿಕ್ಕಿವೆ. ಕಂದಾಯ ಇಲಾಖೆಯ ಕಡತಗಳನ್ನು ಪರಿಶೀಲಿಸಿ ಮತ್ತಷ್ಟು ಶೋಧಕಾರ್ಯ ಆದದ್ದೇ ಆದರೆ, ಇನ್ನೂ ನೂರಾರು ಕೆರೆಗಳು ಸಿಗುತ್ತವೆ. ಅವುಗಳೆಲ್ಲಕ್ಕೂ ಬೇಲಿ ಬಿದ್ದರೆ ಭೂದಾಹಿಗಳು
ವಿಧಾನಸಭೆ ಕ್ಷೇತ್ರವಾರು ಬೇಲಿ ಕಾಣಲಿರುವ ಕೆರೆಗಳು
ಮಹದೇವಪುರ-26, ಬೆಂಗಳೂರು ದಕ್ಷಿಣ-24, ಯಶವಂತಪುರ-19, ಕೆ.ಆರ್. ಪುರ-15, ಬ್ಯಾಟರಾಯನಪುರ-10, ಬೊಮ್ಮನಹಳ್ಳಿ-7, ರಾಜರಾಜೇಶ್ವರಿನಗರ-7, ಯಲಹಂಕ-5, ಸರ್ವಜ್ಞನಗರ-4, ದಾಸರಹಳ್ಳಿ-4, ಸಿವಿ ರಾಮನ್‌ನಗರ-2