Monday, November 30, 2009

ಮಲ್ಲೇಶ್‌ಪಾಳ್ಯದಲ್ಲಿ ಕೆರೆ ಉಳಿಸಿ: ಅಭಿಯಾನ; ಜಾತ್ರೆ

ನಗರದಲ್ಲಿ ಹಿಂದೆ ಕೆರೆಗಳು ಧಾರ್ಮಿಕ ಆಚರಣೆಗಳ ಕೇಂದ್ರ ಬಿಂದುವಾಗಿದ್ದವು. ಇಂದು ಆಚರಣೆಗಳ ಸೊಗಡಿನಿಂದಲೇ ಕೆರೆಗಳನ್ನು ಸಂರಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ’ಕೆರೆ ಉಳಿಸಿಎಂದು ಸಾರಲು, ಊರಹಬ್ಬ, ಜಾತ್ರೆಯ ವಾತಾವರಣ ನಿಮಾರ್ಣ ವಾಗುತ್ತಿದೆ. ಮಲ್ಲೇಶಪಾಳ್ಯ ಇಂತಹ ಜಾಗೃತಿಹಬ್ಬದಲ್ಲಿ ಮಿಂದೆದ್ದಿತು.
ಬೆಂಗಳೂರಿನಲ್ಲಿ ಕೆರೆಗಳು ಅಭಿವೃದ್ಧಿ ಆಗುತ್ತಿರುವುದು ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿ ಮನಸ್ಸಿಗೂ ಆಹ್ಲಾದ ಉಂಟು ಮಾಡುತ್ತದೆ. ಇಂತಹ ಯೋಜನೆಗಳು ಅಲ್ಲಲ್ಲಿ ಆರಂಭವಾಗುತ್ತಿರುವುದು ಸಂತಸಕರ. ಅದರಲ್ಲೂ ಒಂದು ಕೆರೆ ಅಭಿವೃದ್ಧಿಗೆ ಊರ ಸಂಸ್ಕೃತಿಯನ್ನು ಸಾರುವ ಮೆರವಣಿಗೆ ಮಾಡುವುದು ಶ್ಲಾಘನೀಯ. ಇದು ಊರಹಬ್ಬದ ಆಚರಣೆ ಆಗಬೇಕು. ಪ್ರತಿಯೊಂದು ಕೆರೆಯಲ್ಲೂ ಪ್ರತಿ ತಿಂಗಳೂ ತೆಪ್ಪೋತ್ಸವ ನಡೆಯಬೇಕು. ಇದು ನಮ್ಮ ಸಂಸ್ಕೃತಿಯನ್ನು ಸಾರುವ ಉತ್ಸವಗಳು ಕೆರೆಗಳಲ್ಲೇ ಆಗಬೇಕು
ಸರ್ ಸಿ.ವಿ. ರಾಮನ್‌ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಗ್ಗದಾಸಪುರ ಮತ್ತು ಮಲ್ಲೇಶಪಾಳ್ಯ ಕೆರೆ ಅಭಿವೃದ್ಧಿಗಾಗಿ ಜಾಗೃತಿ ಜಾಥಾ ನಡೆಯಿತು. ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಬಿಡಿಎ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿವೆ. ಆದರೆ ಕಗ್ಗದಾಸಪುರ-ಮಲ್ಲೇಶಪಾಳ್ಯ ಕೆರೆಯನ್ನು ಶಾಸಕರ ನಿಧಿಯಿಂದ ಈ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಇಲ್ಲಿನ ವಿಶೇಷ.
ಊರಹಬ್ಬದಂತೆ ಮೆರವಣಿಗೆ ಮೂಲಕ ಸಾಗಿ ಶಾಸಕ ಎಸ್. ರಘು ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳ ನೃತ್ಯ, ಕೆರೆ ಉಳಿಸಿ ಎಂದು ಸಾರುವ ಸಾವಿರಾರು ಟಿಶರ್ಟ್ ಧಾರಿಗಳು ಈ ಮೆರವಣಿಗೆಯ ಹೈಲೈಟ್.
’ಕೆರೆಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ’ ಎಂಬ ಹಿರಿಯ ಮಾತನ್ನು ಅನುಸರಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ’ನಮ್ಮೂರ್ ಕೆರೆ’ ಲೇಖನ ಮಾಲಿಕೆಯಿಂದ ಕೆರೆಯ ನಿಜಸ್ಥಿತಿಯ ಅರಿವಾಯಿತು. ಕಗ್ಗದಾಸಪುರ ಕೆರೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಿಬಿಎಂಪಿ ಇದರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಇದು ಮುಂದಿನ ವರ್ಷ ಕಾರ್ಯಗತವಾಗುತ್ತದೆ. ಆದರೆ, ಈ ಕೆರೆಗೆ ಬೇಲಿ ಹಾಕಿ, ಹೂಳು ತೆಗೆಯಬೇಕಾದ್ದು ತುರ್ತುಸ್ಥಿತಿ. ಆದ್ದರಿಂದ ’ಶಾಸಕರ ನಿಧಿ’ಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್. ರಘು ತಿಳಿಸಿದರು.
ಕೆರೆಗೆ ಬೇಲಿ, ತಡೆಗೋಡೆ, ಹೂಳು ತೆಗೆಯುವುದು, ಮಾಲಿನ್ಯ ನಿಯಂತ್ರಣ, ವಾಕಿಂಗ್ ಟ್ರ್ಯಾಕ್ ಸೌಲಭ್ಯಗಳು ಮುಂದಿನ ಆರು ತಿಂಗಳಲ್ಲಿ ಸುಮಾರು 1.25 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಬಿಬಿಎಂಪಿ ವತಿಯಿಂದ ಮುಂದಿನ ಯೋಜನೆ ಕೈಗೊಂಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಲಾಗುತ್ತದೆ. ಕಗ್ಗದಾಸಪುರ ಕೆರೆಯ ದಡದಲ್ಲಿರುವ ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನದ ಅಭಿವೃದ್ಧಿಗೆ 38 ಲಕ್ಷ ಮೀಸಲಿರಿಸಲಾಗಿದೆ ಎಂದರು.
ಮಲ್ಲೇಶ್‌ಪಾಳ್ಯದಲ್ಲಿ ಬಸ್ ನಿಲ್ದಾಣ, ಈ ಬಸ್‌ನಿಲ್ದಾಣದಿಂದ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ, ಐಟಿಪಿಎಲ್‌ಗೆ ವೋಲ್ವೊ ಬಸ್ ಸೌಲಭ್ಯ ಹಾಗೂ ಹೈಮಾಸ್ಟ್ ವಿದ್ಯುತ್‌ದೀಪಗಳಿಗೆ ಶಾಸಕ ಎಸ್. ರಘು ಚಾಲನೆ ನೀಡಿದರು. ಮಲ್ಲೇಶ್‌ಪಾಳ್ಯ ಮುಖ್ಯರಸ್ತೆ ಅಗಲೀಕರಣಗೊಂಡು, ಡಾಂಬರೀಕರಣವಾಗಿದ್ದು, ಇದನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲಾಯಿತು.

No comments:

Post a Comment