Monday, July 27, 2009

ಅರ್ಕಾವತಿ ಪುನಶ್ಚೇತನಕ್ಕೆ ಕ್ರಿಯಾಯೋಜನೆ: ಶಾಸಕರ ನಿರ್ಲಕ್ಷ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ವ ಅಧಿಕಾರವನ್ನು ಒಳಗೊಂಡ ಪ್ರಾಧಿಕಾರದ ರಚನೆ ಅತ್ಯಗತ್ಯ ಎಂದು ತಾಂತ್ರಿಕ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಈ ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಉಪಯೋಗಕಾರಿ ಕಾರ್ಯಾಗಾರಕ್ಕೆ ಶಾಸಕರೊಬ್ಬರೂ ಹಾಜರಾಗದೆ ನಿರ್ಲಕ್ಷ ಧೋರಣೆ ತೋರಿದ್ದು, ವಿಷಾದನೀಯ.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ, ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ. ಇನ್ನೆಡರು ವಾರಗಳಲ್ಲಿ ಸಮಗ್ರ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿ, ಕ್ರಮ ಕೈಗೊಳ್ಳಲು ಒತ್ತಾಯಪೂರ್ವಕ ಮನವಿ ಮಾಡಬೇಕೆಂದು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು.
ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು ಸಮ್ಮುಖದಲ್ಲಿ ನಡೆದ ಕಾರ್ಯಾಗಾರದಲ್ಲಿ, ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್ ಭಾಗವಹಿಸಿದ್ದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಎಲ್ಲ ಇಲಾಖೆಗಳ ಮೇಲೂ ಅಧಿಕಾರ ಹೊಂದಿರುವ, ಆ ಇಲಾಖೆಗಳಿಂದ ಕೆಲಸ ಮಾಡುವ ಅವಕಾಶ ಹೊಂದಿರುವ ಪ್ರಾಧಿಕಾರವನ್ನು ರಚಿಸಬೇಕೆಂಬ ಒಮ್ಮತ ನಿರ್ಣಯ ಕೈಗೊಳ್ಳಲಾಯಿತು. ಇದರ ಜತೆಗೆ, ಹೊಳೆ ಹರಿಸಲು ನಮ್ಮತನದ ಅರಣ್ಯ ಬೆಳೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅರ್ಕಾವತಿ ನದಿ ಪಾತ್ರದ ಸಂರಕ್ಷಣೆಗಾಗಿ ೨೦೦೩ರಲ್ಲಿ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಲಾಯಿತು.
ಅರ್ಕಾವತಿ ನದಿ ಬಗ್ಗೆ ಹಿಂದಿನ ಸ್ಥಿತಿ ಹಾಗೂ ಪ್ರಸ್ತುತ ಸ್ಥಿತಿ ಬಗ್ಗೆ ಒಂದು ಸಾಕ್ಷ್ಯಚಿತ್ರ ತಯಾರಿಸುವಂತೆ ಆರ್ಘ್ಯಂ ಪ್ರತಿಷ್ಠಾನಕ್ಕೆ ಮನವಿ ಮಾಡಿಕೊಳ್ಳಲಾಯಿತು. ಜತೆಗೆ, ಮಾಧ್ಯಮಗಳು ನದಿ ಬಗ್ಗೆ ಕಾಳಜಿಯುತ ವರದಿಗಳನ್ನು ಪ್ರಕಟಿಸಲು ಕೋರಿಕೊಳ್ಳಲಾಯಿತು. ಮೆಟ್ರೊ ರೈಲು ಸುರಂಗ ಮಾರ್ಗದಿಂದ ಲಕ್ಷಾಂತರ ಕೊಳವೆ ಬಾವಿಗಳು ಮುಚ್ಚಿಹೋಗುತ್ತವೆ. ಅಂತರ್ಜಲಕ್ಕೆ ಧಕ್ಕೆ ಉಂಟಾಗುತ್ತದೆ. ಈ ಬಗ್ಗೆ ವಿವರ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು, ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ್, ಕ್ಯಾಪ್ಟನ್ ಎಸ್. ರಾಜಾರಾವ್, ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ್, ವಿಜಯ ಕರ್ನಾಟಕದ ಆರ್. ಮಂಜುನಾಥ್, ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ, ಹಾಗೂ ಎನ್ವಿರಾನಮೆಂಟಲ್ ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್, ಮಾಜಿ ಶಾಸಕ ಪಿ.ಜಿ.ಆರ್. ಸಿಂಧ್ಯಾ ಅವರು ಅರ್ಕಾವತಿ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಸಭೆ-ಸಮಾರಂಭಗಳಲ್ಲಿ ಮಾರುದ್ದ ಭಾಷಣ ಮಾಡುವ ಶಾಸಕರು, ನದಿ ಪುನಶ್ಚೇತನಕ್ಕೆ ತಾಂತ್ರಿಕ ಸಲಹೆ ಹಾಗೂ ಕ್ರಿಯಾಯೋಜನೆ ರೂಪಿಸುವ ಕಾರ್ಯಾಗಾರದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದರು.
ನದಿ ಪಾತ್ರದಲ್ಲಿ ೨೮ ಶಾಸಕರಿದ್ದಾರೆ. ಅವರೆಲ್ಲರಿಗೂ ಸಂಸ್ಥೆ ವತಿಯಿಂದ ಆಹ್ವಾನಿಸಲಾಗಿತ್ತು. ಆದರೆ, ಯಾರೂ ಇತ್ತ ಸುಳಿಯದಿರುವುದು ತೀವ್ರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತು. ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಮಾರಂಭದಲ್ಲಿ ಪ್ರಚಾರಕ್ಕಾಗಿ ಮಾತ್ರ ನದಿ ಬಗ್ಗೆ ಮಾತನಾಡುತ್ತಾರೆ. ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದಾಗ ಬೆನ್ನು ತೋರುತ್ತಾರೆ. ಇಂತಹವನ್ನು ನಂಬುವುದು ಹೇಗೆ? ಎಂಬ ಪ್ರಶ್ನೆಗೂ ಅಲೆದಾಡುತ್ತಿತ್ತು.
ರಸ್ತೆ ಅಥವಾ ಕಟ್ಟಡಕ್ಕೆ ಪೂಜೆ ಮಾಡಲು ಯಾವ ಕಾರ್ಯಒತ್ತಡವೂ ಇಲ್ಲದೆ ಶಾಸಕರು ಪೋಸು ನೀಡುತ್ತಾರೆ. ಆದರೆ, ಜಲಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಒಂದು ನದಿಗೇ ಮರುಜನ್ಮ ನೀಡುವ ಇಂತಹ ಕಾರ್ಯಯೋಜನೆಗಳಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ಅರಿತುಕೊಳ್ಳಲು ಇಲ್ಲಿಗೆ ಆಗಮಿಸಲಿಲ್ಲ. ಇನ್ನು ಇವರು ಒತ್ತುವರಿಯಂತಹ ಜಟಿಲ ಸಮಸ್ಯೆಯನ್ನು ನಿವಾರಿಸಲು ಸಹಕಾರಿಸುತ್ತಾರೆಯೇ ಎಂಬ ಅನುಮಾನ ಮೂಡಿತ್ತು.
ಶಾಸಕರು ಬರದಿದ್ದರೂ, ಎಲ್ಲ ಇಲಾಖೆಗಳ ಅಧಿಕಾರಿಗಳು ಇಲ್ಲಿದ್ದುದು ಸಂತಸದ ವಿಷಯ. ಅವರೆಲ್ಲರೂ ಸಮಸ್ಯೆಗೆ ಸ್ಪಂದಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಚಿತ್ರ ಶೀರ್ಷಿಕೆ:
ಅರ್ಕಾವತಿ ನದಿ ಪುನಶ್ಚೇತನ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು , ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್.

1 comment:

  1. Innu namma pratinidhigaLa bagge aase ittukondiddiralla, aashshcharya.!!! Bekadre nimma patrikenalli avara photo haaki baralilla anta prachaara maadi, aaga bandaaru. Swamy, kelasa maadoru bandidralla, santosha,
    I dina vrishabhavati kanive (Bangalore University) ge hogidde. Huttuva modale Bengalurina durnaatada Kaaluve avalanna edurugondu nungihaakide. Enu duranta. Nanna magalu promise madida nadi torisu anta keltidre, naananu torisali?
    Shashirekha.

    ReplyDelete