Friday, July 31, 2009

ಕೆಂಪಾಂಬುಧಿ ಕೆರೆಯಲ್ಲಿ ಕೆಂಪೇಗೌಡರ ಸ್ಮಾರಕ

ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಅಭಿವೃದ್ಧಿಯ ರುಚಿ ಕಂಡಿವೆ ನಿಜ. ಆದರೆ, ಅದರ ನಿರ್ವಹಣೆ ಇಲ್ಲದೆ ಆಸ್ವಾದ ಹಳಸಿಹೋಗಿದೆ. ಇದನ್ನು ಆ ಕೆಟ್ಟದ್ದನ್ನು ಹೊರಹಾಕಿ, ಶುಚಿಗೊಳಿಸುವ ಕಾರ್ಯ ಆಗಬೇಕಿದೆ. ಇಂತಹ ಕಾರ್ಯ ಹೈಟೆಕ್ ಅಭಿವೃದ್ಧಿ ಕಂಡು ನಿರ್ವಹಣೆಯ ಕೊರತೆಯಿಂದ ನಲುಗಿಹೋಗಿದ್ದ ಕೆಂಪಾಂಬುಧಿ ಕೆರೆಯೇ ಮಾದರಿ ಆಗುವತ್ತ ಚೊಚ್ಚಲ ಹೆಜ್ಜೆ ಇರಿಸಿದೆ. ಈ ಪ್ರಯತ್ನಕ್ಕೆ ಕ್ಷಿಪ್ರ ವೇಗ ದೊರೆತಿದ್ದು, ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಒಳಚರಂಡಿ ನೀರಿನಿಂದ ಮುಕ್ತವಾಗಲಿದೆ. ಜತೆಗೆ, ಹೊಸ ಅಭಿವೃದ್ಧಿ ಕಾರ್ಯಗಳಿಂದ ನಳನಳಿಸಲಿದೆ.
ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೆಂಪಾಂಬುಧಿ ಕೆರೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲಿದೆ. ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಕ್ರಿಯೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಮುಂದಿನ ವಾರವೇ ಗಿಡ-ಗಂಟಿಗಳನ್ನು ತೆಗೆಯುವ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಒಂದುವಾರದೊಳಗೆ ಟೆಂಡರ್ ಕರೆಯಲಾಗುತ್ತದೆ.
ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಒತ್ತಾಸೆಯ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರೈಸುವಂತೆ ಆದೇಶ ನೀಡಿದ್ದಾರೆ. ಕಡಿಮೆ ಅವಧಿ ಕಾಮಗಾರಿ ಮಾದರಿಯಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.
ಕೆಂಪಾಂಬುಧಿ ಕೆರೆಗೆ ೫ ಮಾರ್ಗದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಇದನ್ನು ನಿಲ್ಲಿಸಿ, ಮಳೆ ನೀರು ಮಾತ್ರ ಕೆರೆಗೆ ಹರಿಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹರಿಯದಂತೆ ತಡೆಯಲು ಪ್ರತ್ಯೇಕ ಕಾಲುವೆ ರಚಿಸಲಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರಿನ ಹೊರತು ಬೇರ್‍ಯಾವ ನೀರು ಕೆರೆಗೆ ಹರಿಯದಂತೆ ತಡೆ ಹಾಕಲಾಗುತ್ತದೆ. ಸ್ಥಳದಲ್ಲಿಯೇ ಇರುವ ಒಳಚರಂಡಿ ನೀರು ಸಂಸ್ಕರಣ ಘಟಕದಿಂದ ಸಾಧ್ಯವಾದಷ್ಟು ನೀರು ಸಂಸ್ಕರಿಸಿ ಅದನ್ನು ಮಾತ್ರ ಕೆರೆಗೆ ಬಿಡಲಾಗುತ್ತದೆ. ಈ ಘಟಕದಿಂದ ನಿತ್ಯ ಒಂದು ದಶಲಕ್ಷ ಲೀಟರ್ ನೀರು ಸಂಸ್ಕರಿಸಬಹುದಾಗಿದೆ.
ಗವೀಪುರಂ ಗುಟ್ಟಹಳ್ಳಿಯ ಪಶ್ಚಿಮಭಾಗದಲ್ಲಿರುವ ಕೆಂಪಾಂಬುಧಿ ಕೆರೆ ಸರ್ವೆ ನಂ. 2ರಲ್ಲಿ 36 ಎಕರೆ ಪ್ರದೇಶದಲ್ಲಿದೆ. ಕೆಂಪಾಂಬುಧಿ ಕೆರೆಗೆ ಒಳಚರಂಡಿ ನೀರು ನೇರವಾಗಿ ಹರಿದುಬರುತ್ತಿದೆ. ಸುಂದರ, ಸ್ವಚ್ಛವಾಗಿರುವ ಕೆರೆಯ ಅಂಗಳ, ವಾಕಿಂಗ್ ಟ್ರ್ಯಾಕ್‌ನಲ್ಲಿ ನಡೆದಾಡಲೂ ಸಾಧ್ಯವಿಲ್ಲದಂತಹ ದುರ್ನಾತ ಈ ಒಳಚರಂಡಿ ಕೊಳಕಿನಿಂದ ನಿರ್ಮಾಣವಾಗಿದೆ. ಕೆರೆಯ ಮಧ್ಯಭಾಗ ಮತ್ತೆ ಕಲ್ಮಶಯುಕ್ತ ಹೂಳಿನಿಂದ ತುಂಬಿಹೋಗುತ್ತಿದೆ. ಇದೆಲ್ಲದ ನಿವಾರಣೆಗಾಗಿ ಇದೀಗ ಅಭಿವೃದ್ಧಿ ಯೋಜನೆ ರೂಪುಗೊಂಡಿದೆ. ಈ ಕೆರೆಯನ್ನು ಶೀಘ್ರ ಶುಚಿಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ.
ಬಿಬಿಎಂಪಿ ವತಿಯಿಂದ ಈ ಕೆರೆಗೆ ಕರೆಯಲಾಗುವ ಟೆಂಡರ್‌ನಲ್ಲಿ ಸಮಯ ನಿಗದಿಪಡಿಸುವ ಜತೆಗೆ ವಿಭಾಗಗಳಲ್ಲಿರುತ್ತದೆ. ಕೆರೆ ಹೂಳೆತ್ತುವುದು, ಏರಿ ನಿರ್ಮಾಣ, ಒಳಚರಂಡಿ ನೀರು ಮಾರ್ಗ ಬದಲಾವಣೆ ಸೇರಿದಂತೆ ಕಾಮಗಾರಿಗಳನ್ನು ವಿಭಾಗಿಸಿ, ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗುತ್ತದೆ. ಈ ಮೂಲಕ ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಶುಚಿ ಹಾಗೂ ಅಭಿವೃದ್ದಿಯಾಗುತ್ತದೆ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದ್ದಾರೆ.
ಕೆಂಪಾಂಬುಧಿ ಕೆರೆ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿಲ್ಲ. ಆದರೆ, ಇದು ಬಸವನಗುಡಿಗೆ ಕಳಸವಿದ್ದಂತೆ. ಆದ್ದರಿಂದ, ಈ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದೇನೆ. ಈ ಕೆರೆಯನ್ನು ಶುಚಿಗೊಳಿಸುವುದರಿಂದ, ಸುತ್ತಮುತ್ತಲಿನ ವಾತಾವರಣವೂ ಸುಧಾರಣೆಯಾಗುತ್ತದೆ. ಕೆಂಪಾಂಬುಧಿ ಕೆರೆಯಲ್ಲಿ ಒಳಚರಂಡಿ ನೀರು ಹೋಗದಂತೆ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಂಪೇಗೌಡರು ಕಟ್ಟಿದ ಈ ಕೆರೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿಕೊಳ್ಳಲು ಬದ್ಧನಾಗಿದ್ದೇನೆ ಎಂದಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗೆಗಿನ ಸ್ಮಾರಕ ಕೆಂಪಾಂಬುಧಿ ಕೆರೆಯ ಬಳಿ ಸ್ಥಾಪನೆ ಆಗಲಿದೆ. ಕೆಂಪೇಗೌಡರು ಬೆಂಗಳೂರಿನ ನಿರ್ಮಾಣಕ್ಕೆ ನೀಡಿದ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರ ನೀಡುವ ಸ್ಮಾರಕ ಭವನ ಇದಾಗಲಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಸಮಗ್ರ ಮಾಹಿತಿ ನೀಡುವ ಬೆಂಗಳೂರು ಪ್ರಥಮ ತಾಣ ಇದಾಗಲಿದೆ.
ಕೆಂಪಾಂಬುಧಿ ಕೆರೆಯ ಬಳಿ ಕೆಂಪೇಗೌಡರು ಸ್ಥಾಪಿಸಿದ್ದ ಗೋಪುರಗಳಿವೆ. ಇದಲ್ಲದೆ ಹಲವು ರೀತಿಯ ಸ್ಮಾರಕಗಳೂ ಇವೆ. ಇವುಗಳೆಲ್ಲವನ್ನೂ ಸಂರಕ್ಷಿಸಲಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ, ಕೆಂಪೇಗೌಡರ ಬಗ್ಗೆ ಸಮಗ್ರ ಚಿತ್ರಣ ನೀಡುವ ಪ್ರಾತ್ಯಕ್ಷಿಕೆಯ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಮ್ಮ ನಗರ ನಿರ್ಮಾತೃ ಕೆಂಪೇಗೌಡರ ಸಾಧನೆ, ಅವರು ನಿರ್ಮಿಸಿರುವ ತಾಣಗಳು ಸೇರಿದಂತೆ ಅವರ ಬಗ್ಗೆ ಸವಿವರವನ್ನು ಈ ಸ್ಮಾರಕ ನೀಡಲಿದೆ.
ಕೆಂಪೇಗೌಡರ ಬಗ್ಗೆ ಎಲ್ಲ ರೀತಿಯ ಮಾಹಿತಿ ನೀಡುವ ತಾಣ ಬೆಂಗಳೂರಿನಲ್ಲಿ ಎಲ್ಲೂ ಇಲ್ಲ. ಈ ಶಿಲ್ಪಿಯ ಸಾಹಸ ಹಾಗೂ ಸಾಧನೆಯ ವಿವರವನ್ನು ಈ ಸ್ಮಾರಕ ಭವನ ಒಳಗೊಳ್ಳಲಿದೆ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ ಹಾಗೂ ಕೆಂಪಾಂಬುಧಿ ಕೆರೆಯ ನಡುವಿನ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಜನವರಿ ವೇಳೆಗೆ ಇದು ಕೂಡ ಪೂರ್ಣಗೊಳ್ಳಲಿದೆ ಎಂದು ಶಾಸಕ ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.

No comments:

Post a Comment