Thursday, July 23, 2009

ಅರ್ಕಾವತಿ ನದಿ: ಪುನಶ್ಚೇತನಕ್ಕೆ ಕ್ರಿಯಾಯೋಜನೆ ಕಾರ್ಯಾಗಾರ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ'ಗಾಗಿ ಕ್ರಿಯಾಯೋಜನೆ ರಚಿಸಲು ಜುಲೈ 25ರಂದು ನಗರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲ ಶಾಸಕರು, ನೀರಿನ ಬಳಕೆದಾರರು, ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರ್ಘ್ಯಂ ಪ್ರತಿಷ್ಠಾನ, ಕೆಎಸ್‌ಪಿಸಿಬಿ, ಕೆಎಸ್‌ಐಐಡಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ಮತ್ತು ಬೆಂಗಳೂರು ಜಲಮಂಡಳಿ ಈ ಕಾರ್ಯಾಗಾರವನ್ನು ಪ್ರಾಯೋಜಿಸಿವೆ.
ಕಾರ್ಯಾಗಾರದಲ್ಲಿ ನದಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ತಜ್ಞರು ತಮ್ಮ ಅಭಿಪ್ರಾಯ ಹಾಗೂ ಸಲಹೆಯ ವರದಿ ಮಂಡಿಸಲಿದ್ದಾರೆ. ಚರ್ಚಾಗೋಷ್ಠಿಯಲ್ಲಿ ಈ ಬಗ್ಗೆ ಸಂವಾದ ನಡೆಸಿ, ಜನಪ್ರತಿನಿಧಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಲಿದ್ದಾರೆ.
ವಿಷಯಗಳ ಬಗ್ಗೆ ಮಾತನಾಡುವರು:
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು- 'ಅರ್ಕಾವತಿ ದರ್ಶನ';
ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ- 'ಚೇಂಜಿಂಗ್ ಸೆನಾರಿಯೊ ಆಫ್ ಅರ್ಬನ್ ಹೈಡ್ರಾಲಜಿ';
ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ಎಸ್. ರಾಜಾರಾವ್- 'ಸ್ಕೇರ್‌ಸಿಟಿ ಆಫ್ ವಾಟರ್- ಬೆಂಗಳೂರು ತನ್ನ ನೈಸರ್ಗಿಕ ಸಾವು ಎದುರಿಸಲಿದೆ';
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಸುಬ್ರಮಣಿಯನ್- 'ಬೆಂಗಳೂರು ಕೆರೆಗಳ ರಕ್ಷಣೆ ಹೇಗೆ?- ಕಾರ್ಯಯೋಜನೆ';
ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪರೆಡ್ಡಿ- 'ಅರ್ಕಾವತಿ ಜಲಾನಯನ ಸಂರಕ್ಷಣೆಯಲ್ಲಿ ಪರಿಸರ ದೃಷ್ಟಿಕೋನದ ಅಳವಡಿಕೆ';
ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ- 'ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಸಂಪನ್ಮೂಲ';
ವಿಜಯ ಕರ್ನಾಟಕದ ಆರ್. ಮಂಜುನಾಥ್- 'ಪತ್ರಕರ್ತರ ದೃಷ್ಟಿಯಲ್ಲಿ ಅರ್ಕಾವತಿ ಸ್ಥಿತಿ';
ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ- 'ಅರ್ಕಾವತಿ ಮಾಹಿತಿಯ ಭಂಡಾರ- ಜಲ ಸಂಪನ್ಮೂಲ ನಿರ್ವಹಣೆಯತ್ತ';
ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್- 'ಅರ್ಕಾವತಿ ಪುನಶ್ಚೇತನಕ್ಕೆ ಸಮಗ್ರ ಕಾರ್ಯ ಮತ್ತು ಶೀಘ್ರ ಕಾನೂನುಗಳ ಅಗತ್ಯ'
ಕಾರ್ಯಾಗಾರದ ಹಿನ್ನೆಲೆ
ಭಾರತೀಯ ಭೂವೈಜ್ಞಾನಿಕ ಸಂಘ ಮತ್ತು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಂಶೋಧನಾ ಕೇಂದ್ರಗಳು 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ' ವಿಷಯದ ಪ್ರಾಮುಖ್ಯತೆ ಮತ್ತು ಸಾಮಾಜಿಕ ಕಳಕಳಿಯನ್ನರಿತು, ಸಮಸ್ಯೆ ಬಗೆಹರಿಯಲು ಬೇಕಾದ ಕ್ರಿಯಾಯೋಜನೆಯನ್ನು ರಚಿಸುವ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅರ್ಕಾವತಿ ಜಲಾನಯನ ದಕ್ಷಿಣ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಒಂದು ಕಿರು ಜಲಾನಯನದ ಅಧ್ಯಯನ ಕೈಗೊಂಡಿದ್ದಾರೆ. ಅಲ್ಲಿಯ ಸಮಸ್ಯೆಗಳ ಬಗ್ಗೆ ಅರಿವು ಉಂಟು ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳೊಂದಿಗೆ ದೊಡ್ಡ ಮುದವಾಡಿಯಲ್ಲಿಯೇ ಇರುವ 'ಸೇಕ್ರೆಡ್' ಎಂಬ ಸ್ವಯಂ ಸೇವಾ ಟ್ರಸ್ಟ್ ಕೈಜೋಡಿಸಿದೆ. ಅಲ್ಲಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಂಪ್ಯೂಟರ್ ಕಲಿಕೆ, ಇಂಗ್ಲಿಷ್ ಭಾಷಾ ಬೋಧನೆ ಮತ್ತು ಪರಿಸರ ಸಮಸ್ಯೆಗಳ ಅರಿವು ಮೂಡಿಸಲು ಪ್ರತಿ ವರ್ಷ ವಿಭಿನ್ನ ಪ್ರದರ್ಶನ ಏರ್ಪಡಿಸುತ್ತಿದೆ. ಈಗ ಅರ್ಕಾವತಿ ಜಲಾನಯನದ ಗ್ರಾಮೀಣ ಭಾಗದಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಉಂಟು ಮಾಡಲು ಮುಂದಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶವನ್ನು ಪ್ರತಿನಿಧಿಸುವ ಎಲ್ಲಾ ಶಾಸಕರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ಕಾರ್ಯನಿರತವಾಗಿರುವ ನೀರಿನ ಬಳಕೆದಾರ ಸರಕಾರಿ ಇಲಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ನದಿ ಪುನಶ್ಚೇತನಕ್ಕೆ ಅವಶ್ಯವಾದ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಗಮನ ಹರಿಸಿ ಅರ್ಕಾವತಿ ನದಿ ಜಲಾನಯನ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಸೂಚಿ ತಯಾರಿಕೆ ಬಗ್ಗೆ ಅರಿವು ಮೂಡಿಸಲು ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪರೆಡ್ಡಿಯವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ.
ಪರಿಸರ ತಜ್ಞ ಡಾ. ಎ.ಎನ್. ಎಲ್ಲಪ್ಪರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಾನಾ ವಿಷಯ ತಜ್ಞರ ಸಮಿತಿ ರಚಿಸಿ, ಕಾರ್ಯಾಗಾರದ ರೂಪುರೇಷೆ ಮತ್ತು ಚರ್ಚಿಸಬೇಕಾದ ವಿಷಯಗಳ ಲೇಖನಗಳ ಹೊತ್ತಿಗೆಯನ್ನು ಹೊರತಂದು ಕಾರ್ಯಾಗಾರದಲ್ಲಿ ಚರ್ಚೆಗೆ ಇಡಲಾಗಿದೆ.
ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಕ್ಯಾಂಪಸ್, ಬೆಂಗಳೂರು ವಿವಿ, ಅರಮನೆ ರಸ್ತೆ. ಸಮಯ: ಬೆಳಗ್ಗೆ 9.30.

No comments:

Post a Comment