Thursday, December 24, 2009

ಹೊರವಲಯದ ಕೆರೆಗಳೇ ಫಿಲ್ಟರ್ ತಾಣ

ಬೆಂಗಳೂರು ನಗರದಲ್ಲಿ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಹೊರವಲಯದ ಕೆರೆಗಳತ್ತ ಯಾರ ಚಿತ್ತವೂ ಹರಿದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮರಳು ಮಾಫಿಯಾ ಕೆರೆಗಳನ್ನೇ 'ಫಿಲ್ಟರ್' ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದೆ.
ಬಿಬಿಎಂಪಿ, ನಗರ-ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಗಮನಹರಿಸದಿದ್ದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಹೊರವಲಯದ ಕೆರೆಗಳು ವಿನಾಶದ ಅಂಚಿಗೆ ತಲುಪುತ್ತವೆ. ಇಲ್ಲೊಂದು ಕೆರೆ ಇತ್ತು ಎಂಬ ಸುಳಿವನ್ನೂ ಕೆರೆಯ ಅಂಗಳದಲ್ಲೇ ಫಿಲ್ಟರ್ ಮರಳು ದಂಧೆ ನಡೆಯುತ್ತಿದ್ದು, ನೂರಾರು ಲಾರಿಗಳು, ಹತ್ತಾರು ಜೆಸಿಬಿಗಳು ಪ್ರತಿನಿತ್ಯವೂ ಕಾರ್ಯನಿರ್ವಹಿಸುತ್ತಿವೆ.
ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್‌ಗಿಂತ ಮುನ್ನ ಕುಪ್ಪಿರೆಡ್ಡಿ ಕೆರೆಯಾದ ಕೂಡಲೇ ಎಡಬದಿಗೆ ತಿರುಗಿದರೆ, ಘಾಟ್‌ನಲ್ಲಿ ಸಂಚರಿಸಿದ ಅನುಭವ ಉಂಟಾಗುತ್ತದೆ. ಅದರ ಉಲ್ಲಾಸವನ್ನು ಕೆಲವೇ ಕಿಮೀ ದಾಟಿದಾಗ, ವಡೇರಹಳ್ಳಿ ಕೆರೆಯ ನೀರ ಸಾಮ್ರಾಜ್ಯ ದುಪ್ಪಟ್ಟುಗೊಳಿಸುತ್ತದೆ. ಕೆರೆಯ ಏರಿ ಮೇಲೆ ನಿಂತರೆ, ದಟ್ಟ ಅರಣ್ಯದ ನಡುವೆ ನೀರು ಕಣ್ಸೆಳೆಯುತ್ತದೆ. ಆದರೆ, ಅದಕ್ಕೇ ಬರಸಿಡಿಲಿನಂತೆ ಬಂದೆರಗುವುದು ಪಂಪ್‌ಸೆಟ್‌ಗಳ ಆರ್ಭಟ, ಜೆಸಿಬಿಗಳ ನರ್ತನ ಹಾಗೂ ಹತ್ತಾರು ಲಾರಿಗಳ ಸಂಚಾರ.
ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಗೋಪಾಲಪುರ ಕೆರೆಗಳ ನೀರ ಸಾಮ್ರಾಜ್ಯ ಹಾಗೂ ಅಲ್ಲಿ ಪರಿಸರಸ್ನೇಹಿ ವಾತಾವರನದ ಬಗ್ಗೆ ವಿಜಯ ಕರ್ನಾಟಕ 'ನಮ್ಮುರ್ ಕೆರೆ' ಲೇಖನ ಮಾಲಿಕೆಯಲ್ಲಿ ವಿವರಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಹೆಮ್ಮೆಪಟ್ಟುಕೊಂಡವು. ಚೆನ್ನಾಗಿವೆಯಲ್ಲ ಎಂದು ಬಿಬಿಎಂಪಿ ಇತ್ತ ನೋಡುವುದು ಬೇಡ ಎಂದು ನಿರ್ಧರಿಸಿತು. ಇದನ್ನೇ 'ಮರಳು ಮಾಫಿಯಾ' ಬಂಡವಾಳವಾಗಿಸಿಕೊಂಡಿದೆ. ಕಳೆದ ವರ್ಷ ಈ ಕೆರೆಗಳ ಸುತ್ತಮುತ್ತ ಫಿಲ್ಟರ್ ಮರಳಿನ ಗಾಳಿಯೂ ಸುಳಿದಿರಲಿಲ್ಲ. ಆದರೆ, ಇದೀಗ ಮೂರ್‍ನಾಲ್ಕು ತಿಂಗಳಿಂದ ಫಿಲ್ಟರ್ ದಂಧೆ ಹೆಮ್ಮರವಾಗಿ ಬೆಳೆದುನಿಂತಿದೆ.
ಕನಕಪುರ ಮುಖ್ಯರಸ್ತೆಯಲ್ಲಿ ಸಾಗುವಾಗ ಇಂತಹ ಕೃತ್ಯ ನಡೆಯುತ್ತಿದೆ ಎಂಬುದು ಅರಿವಿಗೇ ಬರುವುದಿಲ್ಲ. ಟ್ರ್ಯಾಕ್ಟರ್ ಅಷ್ಟೇ ಸಾಗುವ ರಸ್ತೆಗಳನ್ನು ಗ್ರಾಮಸ್ಥರು ನಿರ್ಮಿಸಿಕೊಂಡಿರಬಹುದೆಂದು ಭಾವಿಸಲಾಗುತ್ತದೆ. ಆದರೆ, ಈ ರಸ್ತೆಗಳನ್ನು ಒಂದೆರಡು ಗಂಟೆ ವೀಕ್ಷಿಸಿದರೆ, ಆಗಾಗ ಫಿಲ್ಟರ್ ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಹೊರಬರುತ್ತಿರುತ್ತವೆ. ಅಲ್ಲಿಂದ ಬಂದ ಟ್ರ್ಯಾಕ್ಟರ್‌ಗಳು ವಿಶಾಲ ಪ್ರದೇಶದಲ್ಲಿ ಫಿಲ್ಟರ್ ಮರಳು ಸುರಿಯುತ್ತವೆ. ಅಲ್ಲಿಂದ ಲಾರಿಗಳು ಅದನ್ನು ನಗರಕ್ಕೆ ಕೊಂಡೊಯ್ಯುತ್ತವೆ. ಇದು ಕೆಲವೇ ಪ್ರದೇಶಗಳ ಮಾತು. ಬಹುತೇಕ ಫಿಲ್ಟರ್ ಮರಳಿನ ಘಟಕಗಳಿಗೆ ಲಾರಿ, ಟಿಪ್ಪರ್‌ಗಳು ಸುಲಭವಾಗಿ ಸಾಗಲು ಆ ಮಾಫಿಯಾವೇ ರಸ್ತೆ ನಿರ್ಮಿಸಿಕೊಂಡಿದೆ.
ಬೆಂಗಳೂರಿಗೆ ದೇವನಹಳ್ಳಿ, ರಾಮನಗರದ ಸುತ್ತಮುತ್ತಲಿಂದ ಮರಳು ಸರಬರಾಜಾಗುತ್ತದೆ. ಈ ಎಲ್ಲ ಪ್ರದೇಶಗಳಲ್ಲೂ ಫಿಲ್ಟರ್ ಮರಳಿನ ದಂಧೆಯೇ. ಈ ಬಗ್ಗೆ ಅಲ್ಲಿನ ಎಲ್ಲ ಪೊಲೀಸ್ ಠಾಣೆಗಳು ಸೇರಿದಂತೆ ಎಲ್ಲ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ, ಮಾಮೂಲಿಗೆ ಕೈಚಾಚಿ ಮರಳು ಮಾಫಿಯಾ ಪರಿಸರವನ್ನು ಹಾಳುಮಾಡಲು ಸಹಕರಿಸುತ್ತಿದ್ದಾರೆ. ಕಟ್ಟಡಗಳಿಗೆ ಮಾರಕವಾಗಿರುವ ಈ ದಂಧೆಗೆ ಕುಮ್ಮಕ್ಕು ನೀಡಿ ಜನರ ಭವಿಷ್ಯದ ಮೇಲೂ ಕಲ್ಲುಹಾಕುತ್ತಿದ್ದಾರೆ. ಸಚಿವರು ಇವರಿಗೇ ಮಣೆ ಹಾಕುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವವರ್‍ಯಾರು?
ಎಲ್ಲಿ, ಯಾವ ಕೆರೆಗಳಲ್ಲಿ ಫಿಲ್ಟರ್?
ಕನಕಪುರ ರಸ್ತೆ ಆಸುಪಾಸಿನಲ್ಲಿರುವ ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಸೋಮನಹಳ್ಳಿ, ರಾಜಾಪುರ, ಚಂದಾಪುರ; ಆನೇಕಲ್ ತಾಲೂಕಿನ ಜಿಗಣಿ, ಹಾರಗದ್ದೆ, ರಾಜಾಪುರ, ಸರ್ಜಾಪುರ, ರಾಮನಗರ ತಾಲೂಕಿನ ಬಹುತೇಕ ಪ್ರದೇಶ ಹಾಗೂ ದೇವನಹಳ್ಳಿ ವ್ಯಾಪ್ತಿಯ ವಿಜಯಪುರ ಕೆರೆ ಸೇರಿದಂತೆ ನಗರದ ಹೊರವಲಯದ ಸುಮಾರು ೫೦ಕ್ಕೂ ಹೆಚ್ಚು ಕೆರೆಗಳ ಅಂಗಳದಲ್ಲಿ ಫಿಲ್ಟರ್ ದಂಧೆ ನಡೆಯುತ್ತಿದೆ. ಇಷ್ಟೇ ಅಲ್ಲ, ಈ ಪ್ರದೇಶಗಳಲ್ಲಿರುವ ರೈತರು ತಮ್ಮ ಕೃಷಿಯನ್ನು ಮರೆತು ಫಿಲ್ಟರ್ ದಂಧೆಗೇ ತಮ್ಮನ್ನು ತೆರೆದುಕೊಂಡಿದ್ದಾರೆ.
ತೋಟ ಹಾಗೂ ಮನೆ ಮುಂದಿರುವ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್ ಅಳವಡಿಸಿಕೊಂಡಿರುವ ರೈತರ ಮನೆಗಳ ಮುಂದೆ, ರಾಶಿ ರಾಶಿ ಮಣ್ಣು ಬಿದ್ದಿದೆ. ಕೃಷಿಯನ್ನು ಮರೆತು 'ಫುಲ್‌ಟೈಮ್' ಕೆಲಸವನ್ನಾಗಿ ಫಿಲ್ಟರ್ ಕಾರ್ಯವನ್ನೇ ವಹಿಸಿಕೊಂಡಿದ್ದಾರೆ. ತಿಂಗಳಿಗೆ ಕನಿಷ್ಠ ಐದಾರು ಲೋಡ್ ಮರಳು ಫಿಲ್ಟರ್ ಮಾಡಿದರೆ, ಸುಮಾರು 20 ಸಾವಿರ ರೂ. ಸಂಪಾದನೆ ಆಗುತ್ತದೆ. ಆದ್ದರಿಂದಲೇ, ಬಹುತೇಕ ಮನೆಗಳ ಮುಂದೆ ಮಣ್ಣಿನ ರಾಶಿ, ಕೆಸರು, ಪಂಪ್‌ಸೆಟ್ ಆರ್ಭಟ, ನೀರೆರೆಚಾಟ, ಫಿಲ್ಟರ್ ಮರಳಿನ ಗುಡ್ಡೆಯೇ ಕಾಣುತ್ತದೆ.

No comments:

Post a Comment