Monday, September 21, 2009

ದೊರೆ ಕೊಳಕು ಸಾಮ್ರಾಜ್ಯಕ್ಕೆ ತೆರೆ; ಹೈಟೆಕ್ ಹೊಳೆ

ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯಲ್ಲಿರುವ ದೊರೆ ಕೆರೆಯ 29 ಎಕರೆ ಸಾಮ್ರಾಜ್ಯ ಕಲ್ಮಶದಿಂದ ಮುಕ್ತವಾಗಿದೆ. ಒಳಚರಂಡಿ ನೀರಿಗೆ ತನ್ನ ಸೆರಗಿನಲ್ಲಿ ರೂಪಿಸಿರುವ ಕಾಲುವೆಯಲ್ಲಿ ದಾರಿ ಮಾಡಿಕೊಟ್ಟು, ಹೈಟೆಕ್ ರೂಪಪಡೆದುಕೊಂಡು, ಪ್ರಕಾಶ ಬೀರಲು ಸಜ್ಜಾಗುತ್ತಿದೆ.
ದೊರೆಕೆರೆಗೆ ಒಳಚರಂಡಿ ನೀರು ಈಗ ಹೋಗುತ್ತಿಲ್ಲ. ಕೆರೆಯನ್ನು ಸಂಪೂರ್ಣ ಒಣಗಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಹರಿಯುತ್ತಿದೆ. ಒಳಚರಂಡಿ ನೀರಿಗೆ ಕೆರೆಯ ಅಂಚಿನಲ್ಲಿ ಕಾಲುವೆ ನಿರ್ಮಿಸಿ ಅಲ್ಲಿಂದ ಹರಿದು ಹೋಗುವಂತೆ ಮಾಡಲಾಗಿದೆ. ಕೆರೆಯ ಒಳಗೆ ಎರಡು ದ್ವೀಪಗಳನ್ನು ಸೃಷ್ಟಿಸಲಾಗಿದೆ. ಅಷ್ಟೇಅಲ್ಲ, ಕೆರೆಯ ಅಂಗಳಕ್ಕೆ ಬೇಲಿ ಹಾಕಲಾಗಿದೆ. ಆದರೆ, ಮೂಲ ಸ್ವರೂಪ ಅಥವಾ ವ್ಯಾಪ್ತಿಗೆ ಬೇಲಿ ಹಾಕಿಲ್ಲ ಎಂಬುದು ಅಚ್ಚರಿ ಸಂಗತಿ. ಇಷ್ಟಾದರೂ, ಕೆರೆಗೊಂದು ಬೇಲಿ, ಕಲ್ಮಶಮುಕ್ತ ವಾತಾವರಣ ರೂಪಿಸಲಾಗಿರುವುದು ಸಮಾಧಾನಕರ. ದಾಖಲೆಯಲ್ಲಿರುವ ದೊರೆ ಕೆರೆಯ ವಿಸ್ತೀರ್ಣ 31 ಎಕರೆ 32.88 ಗುಂಟೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ದೊರೆ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಕೆರೆಯನ್ನು ಒಣಗಿಸಿ, ಅದರಲ್ಲಿನ ಕಲ್ಮಶವನ್ನು ಹೊರಹಾಕಲಾಗಿದೆ. ಅದರೊಳಗೆ ಎರಡು ದ್ವೀಪ ನಿರ್ಮಾಣವಾಗಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕೆರೆಗೆ ಮಳೆನೀರು ಮಾತ್ರ ಒಳಬರುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಲ್ಲದೆ, ಬೋಟಿಂಗ್ ವ್ಯವಸ್ಥೆ, ಶೌಚಾಲಯ, ನೀರು ಸಂಸ್ಕರಣ ಘಟಕ, ವಾಚ್‌ಮೆನ್ ಶೆಡ್, ಧ್ಯಾನ ಕೇಂದ್ರ ಒಳಗೊಂಡಂತೆ ಹೈಟೆಕ್ ಮಾದರಿಯಲ್ಲಿ (ನೀಲನಕ್ಷೆ ನೋಡಿ) ದೊರೆಕೆರೆ ಅಭಿವೃದ್ಧಿಯಾಗಲಿದೆ.
ದೊರೆಕೆರೆಯನ್ನು ನಗರಕ್ಕೆ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುವುದು. ಈಗಾಗಲೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಾರು ತಿಂಗಳಲ್ಲಿ ಕೆರೆಗೆ ಹೊಸ ಸ್ವರೂಪ ನೀಡಲಾಗುತ್ತದೆ. ದೊರೆ ಕೆರೆ ಈ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗೆ ಹೈಟೆಕ್ ಸ್ವರೂಪ ನೀಡಲಾಗುತ್ತದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ದ್ವೀಪ, ಬೋಟಿಂಗ್ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 14 ದೊಡ್ಡ ಕೆರೆಗಳಿವೆ. ಅವುಗಳೆಲ್ಲವನ್ನೂ ಉನ್ನತ ದರ್ಜೆಯಲ್ಲಿಯೇ ಅಭಿವೃದ್ಧಿ ಮಾಡಲಾಗುತ್ತದೆ. ಬಿಡಿಎ, ಬಿಬಿಎಂಪಿ ವತಿಯಿಂದ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಥಮ ಹಂತದ ಕಾಮಗಾರಿಯಲ್ಲಿ ಕೆರೆಗಳೂ ಕಲ್ಮಶಂiಮುಕ್ತವಾಗುವಂತೆ ಮಾಡಲಾಗುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಎಲ್ಲ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆಗಳೆಂದರೆ ಹೀಗಿರಬೇಕು ಎಂದು ಪರಿಸರವಾದಿಗಳು ಸೇರಿದಂತೆ ಸ್ಥಳೀಯ ಜನರು ಹೆಮ್ಮೆ ಪಟ್ಟುಕೊಂಡು ಹೇಳಬೇಕು. ಆ ರೀತಿ ಈ ಕೆರೆಗಳು ಅಭಿವೃದ್ಧಿ ಆಗಲಿವೆ.
ಕೊತ್ತನೂರು, ಚುಂಚಘಟ್ಟ ಕೆರೆ ಕಲ್ಮಶ ಮುಕ್ತ
ಕೊತ್ತನೂರು ಹಾಗೂ ಚುಂಚಘಟ್ಟ ಕೆರೆಗೆ ಸುತ್ತಮುತ್ತಲ ಪ್ರದೇಶದ ಒಳಚರಂಡಿ ನೀರು ಸಂಪೂರ್ಣವಾಗಿ ಹರಿಯುತ್ತಿದೆ. ಈ ಕಲ್ಮಶವನ್ನು ಕೆರೆಯ ಹೊರಭಾಗದಿಂದ ಹರಿಯುವಂತೆ ಮಾಡಿ, ಅದಕ್ಕಾಗಿ ವಿಶೇಷ ರೀತಿಯ ಕಾಮಗಾರಿಯನ್ನು ಕೈಗೊಳ್ಳಲು ಬೆಂಗಳೂರು ಒಳಚರಂಡಿ ಮಂಡಳಿ ಅಣಿಯಾಗಿದೆ. ಈ ಎರಡೂ ಕೆರೆಗಳ ಅಂಚಿನಿಂದ ಪೈಪ್‌ಲೈನ್ ಮೂಲಕ ಒಳಚರಂಡಿ ನೀರು ಹರಿಯುವಂತೆ ಮಾಡಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹೋಗದಂತೆ ತಡೆ ಹಾಕಲಾಗುತ್ತದೆ.
ಈ ಎರಡೂ ಕೆರೆಗಳನ್ನು ಕಲ್ಮಶಮುಕ್ತವನ್ನಾಗಿಸುವ ಯೋಜನೆಗೆ ಇನ್ನು ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಯೋಜನೆ ರಚನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದು ಪೂರ್ಣಗೊಂಡ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮೂರು ಅಥವಾ ನಾಲ್ಕು ತಿಂಗಳಲ್ಲೆ ಚುಂಚಘಟ್ಟ ಹಾಗೂ ಕೊತ್ತನೂರು ಕೆರೆಗಳು ಕಲ್ಮಶದಿಂದ ಮುಕ್ತವಾಗುತ್ತದೆ.
ಕೊತ್ತನೂರು ಕೆರೆಯನ್ನು ಬಿಡಿಎ ಅಭಿವೃದ್ಧಿಪಡಿಸಲು 3.6 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲವಾದರೂ, ಇದನ್ನು ಕೂಡಲೇ ಆರಂಭಿಸಲು ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇನ್ನೊಂದು ವರ್ಷದಲ್ಲಿ ಕೊತ್ತನೂರು ಕೆರೆ ಅಭಿವೃದ್ಧಿ ಆಗಲಿದೆ.
ಚುಂಚಘಟ್ಟ ಕೆರೆಯನ್ನು ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆ ಸಂಪೂರ್ಣ ಕಲ್ಮಶಗೊಂಡಿರುವುದರಿಂದ ಏರಿಯ ಕೆಳಭಾಗದಲ್ಲಿ ಕೊಳವೆ ಬಾವಿಯಲ್ಲಿ ಕಲ್ಮಶ ನೀರು ಬರುತ್ತಿದೆ. ಆದ್ದರಿಂದ, ಮೊದಲ ಹಂತದಲ್ಲಿ ಒಳಚರಂಡಿ ನೀರಿಗೆ ತಡೆ ಹಾಕಲಾಗುತ್ತದೆ. ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಶಾಸಕ ಎಂ. ಕೃಷ್ಣಪ್ಪ.
ಗೊಟ್ಟಿಗೆರೆ ಊರ ಬಂಡೆ ಮೇಲೆ ಜಲಸಂಗ್ರಹಗಾರ
ಗೊಟ್ಟಿಗೆರೆ ಕೆರೆ ನೈಸ್ ರಸ್ತೆಯ ಕಾಮಗಾರಿಯಿಂದ ಪ್ರಚಲಿತವಾಗಿದೆ. ಈ ಕೆರೆಯ ಮೇಲೆ ನೈಸ್ ರಸ್ತೆ ಸಾಗದಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಹೈಕೋರ್ಟ್ ಕೂಡ ಸಾಕಷ್ಟು ಸಹಕರಿಸುತ್ತಿದೆ. ಇದೇ ಗೊಟ್ಟಿಗೆರೆಯ ಊರಬಂಡೆ, ಇದೀಗ ಸುದ್ದಿಯಲ್ಲಿದೆ. ನೂರಾರು ಬಡಾವಣೆಗಳಿಗೆ ನೀರು ಕಾವೇರಿ ನೀರು ಕೊಡುವ ಜಲಾಗಾರಕ್ಕೆ ಈ ಊರಬಂಡೆ ಆಶ್ರಯ ನೀಡಲು ಅಣಿಯಾಗುತ್ತಿದೆ.
ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ನಾಲ್ಕನೇ ಹಂತದ 2ನೇ ಘಟ್ಟಕ್ಕೆ ಜಲಸಂಗ್ರಹಗಾರಕ್ಕಾಗಿ ಪ್ರದೇಶವನ್ನು ಹುಡುಕಲಾಗುತ್ತಿತ್ತು. 950 ಮೀಟರ್ ಎತ್ತರವಿರುವ, ಗೊಟ್ಟಿಗೆರೆ ಊರಬಂಡೆ ಪ್ರದೇಶವನ್ನು ಇದೀಗ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಊರಬಂಡೆ ಜಾಗದಲ್ಲಿ ತೋಟಗಾರಿಕೆ ಇಲಾಖೆ ಈಗಾಗಲೇ ಉದ್ಯಾನ ನಿರ್ಮಿಸುವ ಕಾಮಗಾರಿ ಕೈಗೊಂಡಿದೆ. ಇದೀಗ ಜಲಸಂಗ್ರಹಗಾರಕ್ಕೆ 6 ಎಕರೆ ಪ್ರದೇಶವನ್ನು ನೀಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಊರಬಂಡೆ ಪಾತ್ರವಾಗುತ್ತದೆ.
ನಗರದ ಅತ್ಯಂತ ಎತ್ತರ ಪ್ರದೇಶವಾಗಿರುವ ಈ ಊರಬಂಡೆಯಲ್ಲಿ ಜಲಸಂಗ್ರಹಗಾರ ನಿರ್ಮಿಸಿದರೆ, ಪಂಪಿಂಗ್‌ನ ಅಗತ್ಯವಿಲ್ಲದೆ ಗುರುತ್ವಾಕರ್ಷಣೆಯಿಂದಲೇ ನೀರನ್ನು ಪೂರೈಸಬಹುದು. 22 ದಶಲಕ್ಷ ಲೀಟರ್ ನೀರು ಪೂರೈಸಬಹುದು. ಆದ್ದರಿಂದ, ಈ ಪ್ರದೇಶವನ್ನು ಜಲಮಂಡಳಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗೆ ಜಲಮಂಡಳಿ ಖಾತೆ ಸಚಿವ ಕಟ್ಟಾ ಸುಬ್ರಹ್ಮಣನಾಯ್ಡು ಅವರೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಪರಿಸರ ರಕ್ಷಣೆಯಲ್ಲಿ ಉದ್ಯಾನವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 50 ಉದ್ಯಾನವನಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ 15 ಉದ್ಯಾನಗಳನ್ನು ಇನ್ನು 15 ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ. ಕೆಲವು ಉದ್ಯಾನಗಳಲ್ಲಿ ಸಂಗೀತದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

No comments:

Post a Comment