Wednesday, September 16, 2009

ಪುನಶ್ಚೇತನ ಸಮಿತಿ ಸಾಲದು; ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಆಡಳಿತಾರೂಢ ಪಕ್ಷ ಶಾಸಕರು ಹಾಗೂ ಸಚಿವರು ಪಾದಯಾತ್ರೆ ಮಾಡಿ, ಯಶಸ್ಸೂ ಸಾಧಿಸಿದ್ದಾರೆ. ಅಧಿಕಾರದಲ್ಲಿರುವವರು ಕ್ರಮ ಕೈಗೊಳ್ಳಬಹುದಲ್ಲವೇ? ಪಾದಯಾತ್ರೆ ಏಕೆ? ಎಂದು ಹತ್ತಾರು ದನಿಗಳು ಎದ್ದಿವೆ. ನದಿಪಾತ್ರದಲ್ಲಿನ ಒತ್ತುವರಿ ತೆರವಿಗೆ ಜನಜಾಗೃತಿಗಾಗಿ ಈ ಪಾದಯಾತ್ರೆ ಎಂಬುದು ಸ್ಪಷ್ಟ ಉತ್ತರ. ಇದಾದ ಮೇಲೆ ಮುಂದೇನು? ಎಂಬುದು ಈಗಿನ ಪ್ರಶ್ನೆ.ಅರ್ಕಾವತಿ ನದಿ ಸಂರಕ್ಷಣಾ ವೇದಿಕೆ ಹೆಸರಿನಡಿ ಶಾಸಕಸ್.ಆರ್. ವಿಶ್ವನಾಥ್ ಪಕ್ಷಾತೀತವಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಎಲ್ಲ ಪಕ್ಷದ ಶಾಸಕರನ್ನೂ ಆಹ್ವಾನಿಸಲಾಗಿತ್ತು. ಪರಿಸರವಾದಿಗಳು ಹಾಗೂ ಹಲವು ಸಂಘಟನೆಗಳು ಇದರಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಿದರು. ಪ್ರತಿಪಕ್ಷಗಳ ಶಾಸಕರು ಬಿಜೆಪಿ ಶಾಸಕರೊಂದಿಗೆ ನಾವೇಕೆ ಗುರುತಿಸಿಕೊಳ್ಳಬೇಕೆಂದು ಸುಮ್ಮನಾದರು.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದವರೆಗೆ ಪ್ರಥಮ ಹಂತದಲ್ಲೇ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕಿದೆ. ನಂತರ ಹಂತದಲ್ಲಿ ಒತ್ತುವರಿ ಸೇರಿಕೊಂಡಂತೆ ಮಾಲಿನ್ಯರಹಿತ ನದಿಪಾತ್ರ ಸೃಷ್ಟಿಸಬೇಕಿದೆ. ಕೈಗಾರಿಕೆಗಳ ಯಾವುದೇ ಒತ್ತಡಕ್ಕೆ ಮಣಿಯದೆ, ಕಾರ್ಖಾನೆಗಳನ್ನು ನದಿಪಾತ್ರದ ಒಂದು ಕಿಮೀ ದೂರದಿಂದ ಹೊರಗುಳಿಸಬೇಕಿದೆ. ಇದಕ್ಕೆಲ್ಲ ಸಾರ್ವಜನಿಕರು ಹಾಗೂ ಸ್ಥಳೀಯರ ಬೆಂಬಲವೂ ದೊರೆತಿದೆ. ಒತ್ತುವರಿ ತೆಗೆಸಿರಿ, ಇಲ್ಲದಿದ್ದರೆ ನೀರು ಹರಿಯುವುದಿಲ್ಲ. ಇದಕ್ಕಾಗಿ ನಾವೇನು ಮಾಡಬೇಕು ಹೇಳಿ? ನಮ್ಮ ಸಂಪೂರ್ಣ ಸಹಕಾರ ನಿಮಗಿದೆ ಎಂದು ನದಿಪಾತ್ರದ ಮುಖಂಡರು ಹಾಗೂ ನಾಗರಿಕರು ಪಾದಯಾತ್ರಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಅರ್ಕಾವತಿ ನದಿ ಪಾತ್ರದಲ್ಲಿರುವ ನಾಗರಿಕರು ನದಿ ಹರಿಸುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಆದರೆ, ಇವತ್ತು ಬಂದಿದ್ದಾರೆ ನಾಳೆ ಇದಕ್ಕೆ ಚಾಲನೆ ನೀಡುತ್ತಾರೆಯೇ? ಎಂಬ ಅನುಮಾನವೂ ಅವರಲ್ಲಿದೆ. ಇದನ್ನು ನಿವಾರಿಸಬೇಕೆಂದರೆ, ಪಾದಯಾತ್ರೆಯ ಜನಜಾಗೃತಿ ಉದ್ದೇಶ ಈಡೇರಬೇಕಿದೆ. ಭೇದಭಾವವಿಲ್ಲದೆ ನದಿ ಪುನಶ್ಚೇತನಕ್ಕೆ ಸಕಲ ಕ್ರಮವನ್ನೂ ಕೈಗೊಳ್ಳಬೇಕಿದೆ. ಸರಕಾರ ಇದಕ್ಕೆ ಸ್ಪಂದಿಸಿ ಅರ್ಕಾವತಿ ನದಿ ಪುನಶ್ಚೇತನ ಸಮಿತಿಯನ್ನು ರಚಿಸುವ ಭರವಸೆಯನ್ನೂ ನೀಡಿದೆ.
ನದಿ ಪುನಶ್ಚೇತನಕ್ಕೆ ಪಾದಯಾತ್ರೆ, ಸಮಿತಿ ರಚನೆ ಅಷ್ಟೇ ಸಾಲದು. ಇಷ್ಟಾಯಿತಲ್ಲ ಎಂದು ವಿರಮಿಸಿದರೆ, ಇದೊಂದು ಗಿಮಿಕ್ ಎಂದೆನಿಸಿಬಿಡುತ್ತದೆ. ನದಿ ಪುನಶ್ಚೇತನಕ್ಕೆ ಪ್ರಾಮಾಣಿಕ ಕೆಲಸ ಆಗಬೇಕೆಂದರೆ, ರಚಿಸುವ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲೇಬೇಕು. ಎಲ್ಲ ಇಲಾಖೆಗಳಿಂದಲೂ ಕೆಲಸ ಮಾಡಿಸುವ ಅಧಿಕಾರ ಈ ಸಮಿತಿಗೆ ಇರಬೇಕು. ಅರ್ಕಾವತಿ ನದಿ ಪಾತ್ರ ಸಂರಕ್ಷಣೆಗೆ ೨೦೦೩ರಲ್ಲಿ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ತರುವ ಜವಾಬ್ದಾರಿಯೂ ಈ ಸಮಿತಿಗೆ ಇರಬೇಕು.
ನದಿ ಪುನಶ್ಚೇತನಕ್ಕೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತು ಯೋಜನೆ ರೂಪಿಸಬೇಕಿತ್ತು. ಇದನ್ನು ಬಿಟ್ಟು ಸರಕಾರದ ಸಚಿವರು, ಶಾಸಕರು ಪಾದಯಾತ್ರೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಆಪಾದಿಸಿದ್ದಾರೆ. ಪಾದಯಾತ್ರೆ-ಸಮಿತಿ ರಚನೆ ಭರವಸೆ ಹಂತದಲ್ಲಿಯೇ ಈ ರೀತಿಯ ಆಪಾದನೆ ಆರಂಭವಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಆಪಾದನೆಗಳು ಎದುರಾಗಬಹುದು ಎಂಬುದನ್ನು ಅರಿತು, ಸರಕಾರ ಹೆಜ್ಜೆ ಇರಿಸಬೇಕಿದೆ.
ಅರ್ಕಾವತಿ ನದಿ ಪುನಶ್ಚೇತನ ಕಾರ್ಯಕ್ಕೆ ಪಕ್ಷಾತೀತ ಸಹಕಾರವೂ ಅಗತ್ಯ. ಪ್ರತಿಪಕ್ಷ ಕೇವಲ ಆಪಾದನೆಯನ್ನಷ್ಟೇ ಮಾಡಬಾರದು. ಒತ್ತುವರಿ ಮಾಡಿಕೊಂಡಿರುವವರಲ್ಲಿ ಎಲ್ಲ ಪಕ್ಷದ ಮುಖಂಡರೂ ಇದ್ದಾರೆ. ಅವರೆಲ್ಲನ್ನೂ ತೆರವುಗೊಳಿಸಬೇಕು. ಇದಕ್ಕೊಂದು ಸ್ಪಷ್ಟ ನೀತಿ, ನಿರ್ದಾಕ್ಷಿಣ್ಯ ಕ್ರಮ ಅತ್ಯಗತ್ಯ. ಈ ಕಾರ್ಯ ಪ್ರಾಮಾಣಿಕವಾಗಿ ಆಗದಿದ್ದರೆ, ಪಾದಯಾತ್ರೆಯ ಉದ್ದೇಶ ಈಡೇರುವುದಿಲ್ಲ. ಇತಿಹಾಸದಲ್ಲಿ ಒಂದು ಕಾರ್ಯಕ್ರಮವಾಗಿ ಮಾತ್ರ ಉಳಿಯುತ್ತದೆ. ಹಾಗಾಗದಿರಲಿ, ಅರ್ಕಾವತಿ ಹರಿಯಲಿ, ರೈತರು, ಪಟ್ಟಣವಾಸಿಗಳಿಗೆ ನೀರು ಲಭಿಸಲಿ.

No comments:

Post a Comment