Tuesday, September 8, 2009

ರಾಜ್ಯದಲ್ಲಿ ಹೊಸ ಇತಿಹಾಸ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-1: ಸೆಪ್ಟೆಂಬರ್ 3, 2009
ರಾಜ್ಯದಲ್ಲಿ ನಂದಿಬೆಟ್ಟ ಮನೆಮಾತು. ಒಂದು ದಿನದ ಮೋಜಿನ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಪ್ರೇಮಿಗಳಿಗಂತೂ ನೆಚ್ಚಿನ ವಾತಾವರಣ. ವರ್ಷದ ಬಹುತೇಕ ದಿನ ಮಂಜಿನಿಂದ ತುಂಬಿರುವ ನಂದಿಬೆಟ್ಟ, ಜನಪ್ರತಿನಿಧಿಗಳು, ಪರಿಸರವಾದಿಗಳು ಹಾಗೂ ಪರಿಸರ ಪ್ರೇಮಿಗಳ ಸಮೂಹದಲ್ಲಿ ಗುರುವಾರ ಮಿಂದೆತ್ತಿತ್ತು. ಅಷ್ಟೇಅಲ್ಲ, ರಾಜ್ಯದಲ್ಲಿ ಹೊಸ ಇತಿಹಾಸ ರಚನೆಗೆ ಸಾಕ್ಷಿಯಾಯಿತು.
ಅರ್ಕಾವತಿ ನದಿ ಸಂರಕ್ಷಣೆ ವೇದಿಕೆ ಅರ್ಕಾವತಿ ನದಿ ಉಳಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಚಿತ್ರಣ ನಂದಿಬೆಟ್ಟದಲ್ಲಿ ಅನಾವರಣಗೊಂಡಿದ್ದು ಹೀಗೆ.
ಅರ್ಕಾವತಿ ಉಗಮಸ್ಥಾನದಲ್ಲಿ ಮಂಜು ತುಂಬಿದ ವಾತಾವರಣದಲ್ಲೇ ಗುರುವಾರ ಬೆಳಗ್ಗೆ 6.30ರಿಂದ ಗಂಗಾಪೂಜೆ ಆರಂಭಗೊಂಡಿತ್ತು. ಸುಮಾರು ಎರಡು ಗಂಟೆ ನಡೆದ ಗಂಗಾಪೂಜೆಯ ಅಂತ್ಯದಲ್ಲಿ, ಶಾಸಕರಾದ ಎಸ್. ಆರ್. ವಿಶ್ವನಾಥ್, ಎಸ್. ಮುನಿರಾಜು ಹಾಗೂ ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಅರ್ಕಾವತಿಗೆ ಬಾಗಿನ ಅರ್ಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ 9.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಿದರು.
ಸಚಿವ ಸುರೇಶ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡಿದಷ್ಟೇ ಅಲ್ಲ, 'ಹರಿಯಲಿ ಹರಿಯಲಿ ಅರ್ಕಾವತಿ ಹರಿಯಲಿ', 'ಅರ್ಕಾವತಿ ನದಿ ಪುನಶ್ಚೇತನ ಶೀಘ್ರ ಆಗಲಿ', 'ಬೇಕೇ ಬೇಕು ಅರ್ಕಾವತಿ ಬೇಕು' ಎಂಬ ಘೋಷಣೆಗಳನ್ನು ಕೂಗಿ ಪಾದಯಾತ್ರಿಗಳನ್ನು ಉತ್ತೇಜಿಸುತ್ತ, ಅತ್ಯಂತ ಉತ್ಸಾಹದಿಂದ ಸುಮಾರು 8 ಕಿಮೀ ಪಾದಯಾತ್ರೆ ಮಾಡಿದರು. ನಂತರ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಿತು.
ಪಕ್ಷಭೇಧ ಮರೆತು ರಾಜಕೀಯ ಮುಖಂಡರು, ಅರ್ಕಾವತಿ ಪುನಶ್ಚೇತನಕ್ಕೆ ರಚನೆಯಾಗಿರುವ ಸಂಘ-ಸಂಸ್ಥೆಗಳು, ಕರ್ನಾಟಕ ರಕ್ಷಾ ವೇದಿಕೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಘಟಕದ ಕಾರ್ಯಕರ್ತರು ಸೇರಿದಂತೆ ಅರ್ಕಾವತಿ ಉಗಮ ಸ್ಥಾನದಿಂದ ಸುಮಾರು 500ಕ್ಕೂ ಹೆಚ್ಚು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣವಾಗಿ ಜನರಿಂದ ತುಂಬಿಹೋಗಿತ್ತು. ನಂದಿಬೆಟ್ಟದ ಇತಿಹಾಸದಲ್ಲೇ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು ಎಂಬುದು ಸ್ಥಳೀಯರ ಮಾತಾಗಿತ್ತು.
ನದಿ ರಕ್ಷಣೆ-ಪುನಶ್ಚೇತನಕ್ಕಾಗಿ ಜನಪ್ರತಿನಿಧಿಗಳು, ಸಚಿವರು, ಪರಿಸರವಾದಿಗಳು ಒಂದುಗೂಡಿ ನಡೆಸಿದ ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ. ಇಂತಹ ಪ್ರಯತ್ನ ಕೆರೆ-ಕುಂಟೆ, ನದಿಗಳನ್ನು ಉಳಿಸಲು ಇತರೆ ಪ್ರದೇಶಗಳ ನಿವಾಸಿಗಳಿಗೆ ಮಾದರಿ.

ಯಾರು ಏನೆಂದರು?
ಮರಗಳನ್ನು ನೆಡಿ, ಕೆರೆಗಳನ್ನು ಕಟ್ಟಿ, ಪರಿಸರ ಬೆಳೆಸಿ ಎಂದು ಹಿಂದೆ ಹೇಳುತ್ತಿದ್ದರು. ಇಂದು, ಮರಗಳನ್ನು ಕಡಿ, ಕೆರೆಗಳನ್ನು ಮುಚ್ಚಿ, ನಿವೇಶನ ನಿರ್ಮಿಸಿ ಎಂದು ಇಂದು ಹೇಳುತ್ತಿದ್ದಾರೆ. ಬೆಂಗಳೂರಿನ ಜೀವನದಿ ಅರ್ಕಾವತಿ. ಈ ನದಿ ಉಳಿಸಿದರೆ, ಅಂತರ್ಜಲ ಹೆಚ್ಚಾಗುತ್ತದೆ. ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅರ್ಕಾವತಿ ನದಿ ಉಳಿವಿಗೆ ಸರಕಾರ ಸರ್ವ ಪ್ರಯತ್ನವನ್ನೂ ಮಾಡಲಿದೆ. -ಸುರೇಶ್ ಕುಮಾರ್, ಕಾನೂನು ಸಚಿವ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಪಕ್ಷಾತೀತವಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ಕಾವೇರಿ ಮುಗಿದ ಮೇಲೆ ಬೆಂಗಳೂರಿಗೆ ನೀರಿನ ಬರ ಉಂಟಾಗುತ್ತದೆ. ಅದನ್ನು ನೀಗಿಸಲು ಅರ್ಕಾವತಿ ನದಿಯನ್ನು ಹರಿಸಬೇಕು. ಇದರಿಂದ ಅಂತರ್ಜಲ ವೃದ್ದಿಯಾಗಲಿದ್ದು, ಕೆಲವೇ ನೂರು ಅಡಿಗಳಲ್ಲಿ ರೈತರಿಗೆ ಕೊಳವೆ ಬಾವಿಯಲ್ಲಿ ನೀರು ಸಿಗುತ್ತದೆ. ನದಿ ಸಂರಕ್ಷಣೆಗೆ ಸರಕಾರದಿಂದ ಸದ್ಯವೇ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಈ ಉಗಮಸ್ಥಾನದಲ್ಲಿ ನಾವೆಲ್ಲ ಶಪಥ ಮಾಡೋಣ. -ಎಸ್.ಆರ್. ವಿಶ್ವನಾಥ್, ಶಾಸಕ

ಅರ್ಕಾವತಿ ನದಿ ಉಳಿದರೆ ರೈತರ ಬಾಳು ಬೆಳಗುತ್ತದೆ. ಕೃಷಿಗೆ ನೀರು ಹೆಚ್ಚಿನ ಮಟ್ಟದಲ್ಲಿ ಲಭ್ಯವಾಗುತ್ತದೆ. ಈಗಾಗಲೇ 1000 ಅಡಿ ಕೊರೆಯಲಾಗುತ್ತದೆ. ನದಿ ಪುನಶ್ಚೇತನವಾದರೆ 1500 ಅಡಿ ಕೊರೆಯಬೇಕಾಗುತ್ತದೆ. ಆಗ ಸಿಗುವ ನೀರು ವಿಷಮಯವಾಗಿರುತ್ತದೆ. ಆದ್ದರಿಂದ ನಾವೆಲ್ಲ ಎಚ್ಚೆತ್ತು ಒತ್ತುವರಿ ತೆರವುಗೊಳಿಸಿ, ಅರ್ಕಾವತಿ ಹರಿಸಬೇಕು. -ಎಸ್. ಮುನಿರಾಜು, ಶಾಸಕ

ಭೂಮಿ ತಾಯಿಯ ಚರ್ಮವನ್ನು ಸುಲಿಯುತ್ತಿದ್ದೇವೆ. ಮೇಲ್ಪದರವನ್ನು ಘಾಸಿಗೊಳಿಸಿ, ಅಂತರ್ಜಲಕ್ಕೆ ಪೆಟ್ಟು ನೀಡುತ್ತಿದ್ದೇವೆ. ಇದು ಹೀಗೆ ಮುಂದುವರಿದರೆ, ಕುಡಿಯಲು ನೀರಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ, ಅರ್ಕಾವತಿ ನದಿ ಪುನಶ್ಚೇತನಗೊಳಿಸಿ, ಪರಿಸರ ಹಾಗೂ ಅಂತರ್ಜಲ ವೃದ್ಧಿಸಬೇಕಾದ್ದು ಅನಿವಾರ್ಯ. -ಡಾ. ಅ.ನ. ಯಲ್ಲಪ್ಪ ರೆಡ್ಡಿ

ಪಾದಯಾತ್ರೆ ಹೆಜ್ಜೆಗಳು- ದಿನ-1
ಬೆ. 6.30 ಗಂಟೆ: ಅರ್ಕಾವತಿ ಉಗಮಸ್ಥಾನದಿಂದ ಬೆಳಗ್ಗೆ 6.30ರಿಂದ ಗಂಗಾಪೂಜೆ. ಪಾದಯಾತ್ರೆ ನೆನಪಿಗೆ ಕಲ್ಲಿನ ಫಲಕ ಪ್ರತಿಷ್ಠಾಪನೆ.
10 ಗಂಟೆ: ಸಚಿವ ಸುರೇಶ್‌ಕುಮಾರ್ ಅವರಿಂದ ಪಾದಯಾತ್ರೆಗೆ ಚಾಲನೆ. ಸಚಿವರಿಂದ 8 ಕಿಮೀ ನಡಿಗೆ. ನಂತರ ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಕೆ.
11.30: ಹೆಗ್ಗಡಿ ಹಳ್ಳಿ ಕೆರೆಗೆ ಆಗಮನ. ಮಾರ್ಗಮಧ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ಘಟಕದ ಕಾರ್ಯಕರ್ತರಿಂದ ಪಾದಯಾತ್ರಿಗಳಿಗೆ ಸ್ವಾಗತ.
12.30 ಗಂಟೆ: ಸೀಗೇಹಳ್ಳಿ ಮೂಲಕ ಮೇಳೇಕೋಟೆಗೆ ಆಗಮನ. ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಂದ ಸ್ವಾಗತ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಲು ನಿರ್ಧಾರ.
2.00 ಗಂಟೆ: ಲಿಂಗನಹಳ್ಳಿ ಕ್ರಾಸ್‌ನಲ್ಲಿ ಅದ್ಧೂರಿ ಸ್ವಾಗತ. ರಸ್ತೆಯ ಇಕ್ಕೆಲಗಳಲ್ಲಿ ಬಾಳೆಕಂಬ ಕಟ್ಟಿ, ಹೂಮಾಲೆ ಹಾಕಲಾಗಿತ್ತು. ಪಾದಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ಥಳೀಯರು, ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
2.30 ಗಂಟೆ: ರಾಜಘಟ್ಟದಲ್ಲಿ ಗಾಂಧಿವಾದಿ ಶಂಕರಲಿಂಗೇಗೌಡರು ಸೈಕಲ್ ಮೇಲೆ ರಾಷ್ಟ್ರಧ್ವಜ ಹಾಗೂ ನಾಡ ಬಾವುಟವನ್ನು ಕಟ್ಟಿಕೊಂಡು ಬಂದು, ಪಾದಯಾತ್ರಿಗಳಿಗೆ ಸ್ವಾಗತ ಕೋರಿದರು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
3.00 ಗಂಟೆ ರಾಜಘಟ್ಟದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪಾದಯಾತ್ರಿಗಳು, ಅಲ್ಲಿ ಭೋಜನ ಮುಗಿಸಿದರು.
ಸಂ. 5 ಗಂಟೆ: ತಿಮ್ಮಸಂದ್ರದ ಮೂಲಕ ದೊಡ್ಡಬಳ್ಳಾಪುರಕ್ಕೆ ಪಾದಯಾತ್ರೆ ಆಗಮಿಸಿತು. ನಂತರ ಆಸ್ಪತ್ರೆ ವೃತ್ತದಲ್ಲಿ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಂದ ಪರಿಸರ ಗೀತೆಗಳ ಗಾಯನ ಹಾಗೂ ಜನಪ್ರತಿನಿಧಿಗಳು ಮತ್ತು ಸ್ಥಳೀಯರೊಂದಿಗೆ ಸಂವಾದ ನಡೆಯಿತು.

No comments:

Post a Comment