Tuesday, September 8, 2009

ನಿರೀಕ್ಷೆಗೂ ಮೀರಿದ ಸ್ಪಂದನೆ, ಉನ್ನತ ಸಮಿತಿ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-3: ಸೆಪ್ಟೆಂಬರ್ 5, 2009
ಅರ್ಕಾವತಿ ನದಿ ಪುನಶ್ಚೇತನ, ಜನಜಾಗೃತಿ ಪಾದಯಾತ್ರೆಗೆ ಮೂರನೇ ದಿನ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಜತೆಗೆ, ನದಿ ಪುನಶ್ಚೇತನಕ್ಕೆ ಮೂರು ಸಚಿವರನ್ನೊಳಗೊಂಡ ಸರಕಾರದ ಉನ್ನತ ಸಮಿತಿ ರಚನೆಗೂ ಮನ್ನಣೆ ಸಿಕ್ಕಿತು. ಸಾರಿಗೆ ಸಚಿವ ಆರ್. ಅಶೋಕ್ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಸಚಿವ ರಾಮಚಂದ್ರಗೌಡ ಅವರು ಪಾದಯಾತ್ರೆಯಲ್ಲಿ ಕೊಂಚದೂರ ಹೆಜ್ಜೆ ಹಾಕಿ ನದಿ ಪುನಶ್ಚೇತನಕ್ಕೆ ಸರಕಾರ ಕಂಕಣಬದ್ಧರಾಗಿರುವುದಾಗಿ ಪ್ರಕಟಿಸಿದ್ದು, ಶನಿವಾರದ ಪಾದಯಾತ್ರೆಯ ಹೈಲೈಟ್.
ಹೆಸರಘಟ್ಟದಿಂದ ಬೆಳಗ್ಗೆ 7.15ಕ್ಕೆ ಆರಂಭವಾದ ಮೂರನೇ ದಿನದಪಾದಯಾತ್ರೆಗೆ ತರಬನಹಳ್ಳಿಯಲ್ಲಿ ಊರ ಹಬ್ಬದ ಮೆರವಣಿಗೆ ಸೊಗಡಿನ ಸ್ವಾಗತ ದೊರೆಯಿತು. ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಪಾದಯಾತ್ರೆಗೆಸಾರಿಗೆ ಸಚಿವ ಆರ್. ಅಶೋಕ್ ಸ್ವಾಗತಿಸಿ, ಕೊಂಚ ದೂರ ಹೆಜ್ಜೆ ಹಾಕಿದರು. ಅಲ್ಲದೆ, ಮಹಿಳೆಯರು ಹೊತ್ತುತಂದಿದ್ದ ಕಳಸದ ನೀರನ್ನು ಅರ್ಕಾವತಿ ನದಿ ಪಾತ್ರದಲ್ಲಿ ಸುರಿಯುವ ಮೂಲಕ ಪುನಶ್ಚೇತನದ ಶಪಥ ಮಾಡಿದರಲ್ಲದೆ, ಅದನ್ನೇ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ನಾಗರಿಕರಿಗೆ ಬೋಧಿಸಿದರು.
ತರಬನಹಳ್ಳಿಯಿಂದ ಹೆಗ್ಗಡದೇವನಪುರದವರೆಗೆ ಡೊಳ್ಳುಕುಣಿತ, ತಮಟೆ, ದೊಡ್ಡ ಮುಖವಾಡದ ಗೊಂಬೆಗಳು, ಪೂಜಾಕುಣಿತದೊಂದಿಗೆ ಸಾವಿರಾರು ಜನರು ಪ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರ 6 ಕಿಮೀ ದೂರ ನದಿ ಪಾತ್ರದಲ್ಲೇ ಪಾದಯಾತ್ರೆ ಸಾಗಿತು. ಮಾಕಳಿ ಮೂಲಕ, ರಾವುತ್ತನಹಳ್ಳಿ ಕ್ರಾಸ್ ಮೂಲಕ ಸೊಂಡೆಕೊಪ್ಪ ತಲುಪಿದ ಪಾದಯಾತ್ರಿಗಳಲ್ಲಿ ನದಿ ಪುನಶ್ಚೇತನ ಸಮಿತಿ ರಚನೆಯ ಸಂತಸ ನಡಿಗೆಯ ಉತ್ಸಾಹವನ್ನು ಮರೆಮಾಡಿತ್ತು. ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ ತಂಡದ ಸುಗಮ ಸಂಗೀತ ಗಾಯನ, ಪರಿಸರ ರಕ್ಷಣೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪಾದಯಾತ್ರಿಗಳನ್ನುಪ್ರೇರೇಪಿಸಿತು.
ಮಾಕಳಿಯಲ್ಲಿ ಕೈಗಾರಿಕೆಗಳ ಬೆಂಬಲ
ಅರ್ಕಾವತಿ ನದಿ ಪಾತ್ರವನ್ನು ಉಳಿಸಿ, ಹರಿಸಲು ಹಾಗೂ ಒತ್ತುವರಿ ತೆರವು, ಮಾಲಿನ್ಯ ಬಿಡುವ ಕೈಗಾರಿಕೆಗಳನ್ನು ತೆರವುಗೊಳಿಸಲು ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ.
ಪಾದಯಾತ್ರಿಗಳನ್ನು ಸ್ವಾಗತಿಸಲು ಸಂಘ ಮಾಕಳಿಯಲ್ಲಿ ಸಭೆ ಆಯೋಜಿಸಿತ್ತು. ನದಿ ಪಾತ್ರದ ಒಂದು ಕಿಮೀ ಆಸುಪಾಸು ಮಾಲಿನ್ಯ ಉಂಟು ಮಾಡದ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್‌ಗಳನ್ನು ಉಳಿಸಿಕೊಳ್ಳಲು ಸಂಘ ಮನವಿ ಮಾಡತು. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ವಿಶ್ವನಾಥ್ ಭರವಸೆ ನೀಡಿದರು.
ವಿರೋಧ
ಸರಕಾರ 2003ರಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ, ನದಿ ಪಾತ್ರದಿಂದ 1 ಕಿಮೀ ಆಸುಪಾಸು ಯಾವುದೇ ಕಾರ್ಖಾನೆಗಳಿರುವಂತಿಲ್ಲ. ಮಾಲಿನ್ಯ- ಮಾಲಿನ್ಯ ರಹಿತ ಕಾ ರ್ಖಾನೆಗಳೆಂದು ವಿಂಗಡಿಸಿಲ್ಲ. ಆದ್ದರಿಂದ ಎಲ್ಲ ಕೈಗಾರಿಕೆಗಳನ್ನು ತೆರವುಗೊಳಿಸಬೇಕು. ಯಾವ ಒತ್ತಡಕ್ಕೂ ಮಣಿಯಬಾರದು ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ಅಭಿಪ್ರಾಯಪಟ್ಟರು. ಕೈಗಾರಿಕೆಗಳು ಉಳಿಯಲು ಅನುವು ಮಾಡಿಕೊಟ್ಟರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಏನೆಂದರು?
ಕಂದಾಯ ಸಚಿವ, ಜಲಮಂಡಳಿ ಸಚಿವ ಹಾಗೂ ನೀರಾವರಿ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿಯನ್ನು ಅರ್ಕಾವತಿ ನದಿ ಪುನಶ್ಚೇತನಕ್ಕೆ ರಚಿಸಲಾಗುತ್ತದೆ. ಮುಖ್ಯಮಂತ್ರಿ ಅವರು ಚೀನಾದಿಂದ ಬಂದಕೂಡಲೇ ಇದಕ್ಕೆ ಚಾಲನೆ ನೀಡಲಾಗುತ್ತದೆ. ಇದು ಕೇವಲ ಪಾದಯಾತ್ರೆ ಅಲ್ಲ, ಸರಕಾರದ ಹಣದ ಸದುಯೋಗ ಹಾಗೂ ಪರಿಸರ ಉಳಿಸುವ ಅರಿವನ್ನು ಜನರಲ್ಲಿ ಮೂಡಿಸುವ ಆಂದೋಲನ. ನದಿ-ಕೆರೆ ಒತ್ತುವರಿಯನ್ನು ಸರಕಾರ ಸಹಿಸುವುದಿಲ್ಲ. ಕೈಗಾರಿಕೆಗಳು ಸೇರಿದಂತೆ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ

ಕಲುಷಿತ ನೀರನ್ನು ನದಿಗೆ ಬಿಡುವ ಕಾರ್ಖಾನೆಗಳು ಹಾಗೂ ನದಿಪಾತ್ರದಲ್ಲಿ ಬಡಾವಣೆ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಖಾನೆಯನ್ನು ಬದಲಿಸಬಹುದು. ಆದೆ ನದಿಯನ್ನು, ಅದರ ಹರಿವನ್ನು ಬದಲಿಸಲು ಸಾಧ್ಯವಿಲ್ಲ. ಒತ್ತುವರಿ ತೆರವಿಗೆ ಯಾವ ಒತ್ತಡಕ್ಕೂ ಮಣಿಯುವುದಿಲ್ಲ. -ಎಸ್.ಆರ್. ವಿಶ್ವನಾಥ್, ಶಾಸಕ

ಪಾದಯಾತ್ರೆ ಹೆಜ್ಜೆಗಳು- ದಿನ-3
ಬೆಳಗ್ಗೆ 7.15: ಹೆಸರಘಟ್ಟದಿಂದ ಹೊರಟು ಐವರುಕಂಡ ಪುರದ ಮೂಲಕ ತಿರುಮಳಾಪುರ ಪ್ರವೇಶ. ಸ್ಥಳೀಯರಿಂದ ಹಸಿರುತೋರಣದ ಸ್ವಾಗತ.
9.30: ತರಬನಹಳ್ಳಿಯಲ್ಲಿ ಸಚಿವ ಆರ್. ಅಶೋಕ್ ಅವರಿಂದ ಸ್ವಾಗತ. ಊರಹಬ್ಬದ ಮೆರವಣಿಗೆಯಲ್ಲಿ ಪಾದಯಾತ್ರೆ ಹೆಜ್ಜೆ.
10.45: ಅಶೋಕ್ ಅವರಿಂದ ಅರ್ಕಾವತಿ ನದಿ ಪಾತ್ರಕ್ಕೆ ಕಳಸ ನೀರು ಸಮರ್ಪಣೆ. ಮೆರವಣಿಯಲ್ಲಿ ಮುನಿಯಯ್ಯನ ಪಾಳ್ಯ, ಆಲೂರಿಗೆ ಪ್ರವೇಶ. ಅಲ್ಲಿ ಸ್ವಾಗತ, ಜನಜಾಗೃತಿ ಸಭೆ.
12.30: ಹೆಗ್ಗಡದೇವನಪುರಕ್ಕೆ ಆಗಮನ. ನೃತ್ಯ ಹಾಗೂ ಡೊಳ್ಳು ಕುಣಿತದ ಸ್ವಾಗತ.
1.45: ಮಾಕಳಿಯಲ್ಲಿರುವ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದ ಭೀಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ.
2.00: ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆಸಭೆ.
3.20: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮರದ ಕಾಲಿನ ಕುಣಿತ ಸ್ವಾಗತದೊಂದಿಗೆ ರಾವುತ್ತಹಳ್ಳಿ ಕ್ರಾಸ್ ಪ್ರವೇಶ.
4.30: ಶಿವಪುರದಲ್ಲಿ ಸ್ವಾಗತ ಸಭೆ.
5.20: ರಾವುತ್ತನಹಳ್ಳಿ ಪ್ರವೇಶ. ಗ್ರಾಮದಲ್ಲಿ ಸಭೆ. ಸಚಿವ ರಾಮಚಂದ್ರಗೌಡಪಾದಯಾತ್ರೆಗೆ ಸೇರ್ಪಡೆ.
6.00: ಸೊಂಡೆಕೊಪ್ಪ ಪ್ರವೇಶ. ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ವೈ.ಕೆ. ಮುದ್ದುಕೃಷ್ಣ ಅವರಿಂದ ಪರಿಸರಗೀತೆಗಳ ಗಾಯನ.

No comments:

Post a Comment