Tuesday, September 8, 2009

ತಿಪ್ಪಗೊಂಡನಹಳ್ಳಿಯಲ್ಲಿ ಅಂತ್ಯ; ಪುನಶ್ಚೇತನಕ್ಕೆ ಮುನ್ನುಡಿ

ಅರ್ಕಾವತಿ ಪಾದಯಾತ್ರೆ-ದಿನ-4: ಸೆಪ್ಟೆಂಬರ್ 6, 2009
ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾಗುತ್ತಿದ್ದಾಗ ಸಾವಿರಾರು ಜನರು ಕಾಮಗಾರಿಯಲ್ಲಿ ತೊಡಗಿದ್ದರು. ಅದಾದ ಮೇಲೆ, ಸುಮಾರು 76 ವರ್ಷಗಳ ನಂತರ, ಈ ಜಲಾಶಯದಲ್ಲಿ ಸಾವಿರಾರು ಜನರು ಒಂದೇ ಬಾರಿಗೆ ಇದ್ದದ್ದು ಸೆಪ್ಟೆಂಬರ್ 6, 2009ರ ಭಾನುವಾರ. ಅಂದು ಅರ್ಕಾವತಿ ನದಿ ನೀರಿಗೆ ಅಡ್ಡಲಾಗಿ ಕಾಮಗಾರಿ ನಡೆಯುತ್ತಿದ್ದು, ಇಂದು ಆ ನದಿಗೆ ನೀರು ಹರಿಸಲು ಗಂಗಾಪೂಜೆ ನೆರವೇರಿಸಲು ಜನಪ್ರತಿನಿಧಿಗಳೊಂದಿಗೆ ನಾಗರಿಕರು ಸೇರಿದ್ದರು.
ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರಿಗೆ ಅರ್ಕಾವತಿ ಸಂರಕ್ಷಣಾ ವೇದಿಕೆ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ನಾಲ್ಕು ದಿನದ 106 ಕಿಲೋಮೀಟರ್‌ಗಳ ಪಾದಯಾತ್ರೆ ತಿಪ್ಪಗೊಂಡನಹಳ್ಳಿಯಲ್ಲಿ ಭಾನವಾರ ಮುಕ್ತಾಯವಾಯಿತು. ಪಾದಯಾತ್ರೆಯ ಅಂತಿಮಸ್ತರದಲ್ಲಿ ಸಂಸದ ಅನಂತಕುಮಾರ್, ಸಾರಿಗೆ ಸಚಿವ ಆರ್. ಅಶೋಕ್, ಶಾಸಕರಾದ ಎಸ್. ಮುನಿರಾಜು, ರವಿಸುಬ್ರಹ್ಮಣ್ಯ, ವಿಜಯಕುಮಾರ್ ಅವರೊಂದಿಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯನ್ನು ಸೇರಿಕೊಂಡು, ಗಂಗಾಪೂಜೆಗೆ ಸಾಕ್ಷೀಭೂತರಾದರು.
ಅಂತಿಮ ದಿನದ ಪಾದಯಾತ್ರೆ ಸೊಂಡೆಕೊಪ್ಪದಿಂದ ಭಾನುವಾರ ಬೆಳಗ್ಗೆ ಆರಂಭವಾಯಿತು. ಮಲ್ಲಸಂದ್ರದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತಿಪ್ಪಗೊಂಡನಹಳ್ಳಿಯವರೆಗಿನ ಪ್ರತಿ ಹಳ್ಳಿಯಲ್ಲಿಯೂ ಹಸಿರತೋರಣದ ಸ್ವಾಗತದೊಂದಿಗೆ ಜನಜಾಗೃತಿ ಸಭೆಗಳು ನಡೆದವು. ಹಾಗೆಯೇ, 200ರ ಆಸುಪಾಸಿನಲ್ಲಿದ್ದ ಪಾದಯಾತ್ರಿಗಳ ಗಣನೆ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಗೆ ವಿಸ್ತರಿಸುತ್ತಾ ಹೋಯಿತು. ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದ ಪಾದಯಾತ್ರೆಗೆ ಚೋಳನಾಯಕಹಳ್ಳಿ ಸಮೀಪ ಸಂಸದ ಅನಂತಕುಮಾರ್, ಸಚಿವ ಆರ್. ಅಶೋಕ್, ಶಾಸಕರಾದ ರವಿಸುಬ್ರಹ್ಮಣ್ಯ, ವಿಜಯ್‌ಕುಮಾರ್ ಸೇರಿಕೊಂಡು, ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಹೆಜ್ಜೆ ಹಾಕಿದರು.
ಜಲಾಶಯದ ಹಿಂಭಾಗಕ್ಕೆ ಸಾಗಿದ ಪಾದಯಾತ್ರೆ, ಗಣೇಶನಂತೆ ಆಕಾರ ಹೊಂದಿರುವ ಕಲ್ಲಿಗೆ ವಿಘ್ನೇಶನ ಪೂಜೆ ನೆರವೇರಿಸಿತು. ಅಲ್ಲಿ ನಡೆದ ಗಂಗಾಪೂಜೆಯಲ್ಲಿ ಎಲ್ಲರೂ ಭಾಗವಹಿಸಿದರು. ಅರ್ಕಾವತಿ ಉಗಮಸ್ಥಾನದಿಂದ ಪಾದಯಾತ್ರೆಯಲ್ಲಿ ರಥದ ಮೂಲಕ ತಂದಿದ್ದ ಪಂಚಕುಂಭಗಳಲ್ಲಿನ ನೀರನ್ನು ವಿಶ್ವನಾಥ್ ಹಾಗೂ ಮುನಿರಾಜು ದಂಪತಿ ಮತ್ತು ಅನಂತಕುಮಾರ್, ಅಶೋಕ್ ಅವರು ಜಲಾಶಯಕ್ಕೆ ಸಮರ್ಪಿಸಿದರು. ನಂದಿಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ಇಲ್ಲಿಗೆ ಸರಾಗವಾಗಿ ಹರಿಯಲಿ ಎಂದು ಪ್ರಾರ್ಥಿಸಿದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಚಿವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಬೇಕೆಂಬ ಮನವಿ ಪತ್ರವನ್ನು ಪಾದಯಾತ್ರಿಗಳ ಪರವಾಗಿ ವಿಶ್ವನಾಥ್ ಹಾಗೂ ಮುನಿರಾಜು ಅವರು ಸಂಸದ ಅನಂತಕುಮಾರ್, ಸಚಿವ ಅಶೋಕ್ ಅವರಿಗೆ ನೀಡಿದರು. ಮುಖ್ಯಮಂತ್ರಿಯವರಿಗೆ ಈ ಮನವಿ ಪತ್ರ ತಲುಪಿಸಲು ಕೋರಲಾಯಿತು. ಅರ್ಕಾವತಿ ಪುನಶ್ಚೇತನ ಸಮಿತಿಗೆ ಎಲ್ಲ ಇಲಾಖೆಗಳೂ ನಿರ್ದೇಶನ ನೀಡುವ, ಅವರಿಂದ ಕೆಲಸ ಮಾಡುವ ಅಧಿಕಾರ ಸೇರಿದಂತೆ ಸರ್ವ ಅಧಿಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಇಂತಹ ಇತಿಹಾಸ ರಚಿಸಿದ ಪಾದಯಾತ್ರೆಯ ಉದ್ದೇಶವನ್ನು ಈಡೇರಿಸುವ ಸ್ಪಷ್ಟ ಸೂಚನೆಯನ್ನೂ ರಾಜ್ಯ ಸರಕಾರ ನೀಡಿದೆ. ಸಚಿವರನ್ನು ಒಳಗೊಂಡ ಉನ್ನತಾಧಿಕಾರಿಗಳ ಸಮಿತಿ ರಚನೆಯನ್ನು ಮಾಡುವುದಾಗಿ ಹೇಳಿದೆ. ಇದು ಹೇಳಿಕೆಗೆ ಮಾತ್ರ ಸೀಮಿತವಾಗದೆ, ನದಿಯೊಂದನ್ನು ಪುನಶ್ಚೇತನಗೊಳಿಸಿ ಇತಿಹಾಸ ರಚನೆಯ ಕೆಲಸ ರಾಜ್ಯ ಸರಕಾರದಿಂದ ಪ್ರಾಮಾಣಿಕವಾಗಿ ಆಗಬೇಕಿದೆ. ಆಗ, ಇಡೀ ರಾಷ್ಟ್ರಕ್ಕೆ ಅರ್ಕಾವತಿ ನದಿ ಪುನಶ್ಚೇತನ ಮಾದರಿಯಾಗುತ್ತದೆ.

ಏನೆಂದರು?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರೀಯ ಜಲನೀತಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರ್ಣವಾಗಿ ಸಮ್ಮತವಾಗುತ್ತದೆ. ನದಿ ಪುನಶ್ಚೇತನದ ಅವರ ಕನಸನ್ನು ರಾಜ್ಯಮಟ್ಟದಲ್ಲಿ ಪೂರ್ಣಗೊಳಿಸುವ ಕಾರ್ಯ ಅರ್ಕಾವತಿಯಿಂದಲೇ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಹರಿಯುತ್ತಿದ್ದ ನದಿಯನ್ನು ನಾವು ಬತ್ತಿಸಿದ್ದೇವೆ. ಎಲ್ಲವನ್ನೂ ಹೊಂದಿರುವ ಈ ಮಹಾನಗರಿಗೆ ನದಿ ದಂಡೆಯ ವೈಭವವೂ ಲಭಿಸಿದರೆ ಉದ್ಯಾನನಗರಿಯ ಸೊಬಗು ಮತ್ತಷ್ಟು ವೃದ್ಧಿಸುತ್ತದೆ. ಅಷ್ಟೇಅಲ್ಲ, ಕೃಷಿ ಚಟುವಟಿಕೆಗೆ ಬೆನ್ನೆಲುಬಾಗುವ ಅರ್ಕಾವತಿ ನದಿ ಪುನಶ್ಚೇತನದ ಕನಸನ್ನು ರಾಜ್ಯ ಸರಕಾರ ನನಸು ಮಾಡುತ್ತದೆ. ಕೇಂದ್ರದ ಪ್ರತಿನಿಧಿಗಳು ಇದರಲ್ಲಿರುತ್ತಾರೆ. -ಅನಂತಕುಮಾರ್, ಸಂಸದ
ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಲಿದೆ. ಇದನ್ನು ಅರಿತಿರುವ ಸರಕಾರ ಮುಂದಾಲೋಚನೆ ದೃಷ್ಟಿಯಿಂದ ಅರ್ಕಾವತಿ ನದಿ ಪುನಶ್ಚೇತನವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಮತ್ತೊಂದು ವೃಷಭಾವತಿ ಆಗಲು ಬಿಡುವುದಿಲ್ಲ. ಅರ್ಕಾವತಿ ನದಿಯನ್ನು ಮಲೀನ ಮಾಡುತ್ತಿರುವವರು, ಒತ್ತುವರಿ ಮಾಡಿಕೊಂಡಿರುವರು, ನದಿ ಪಾತ್ರದಲ್ಲಿ ಕೈಗಾರಿಕೆ, ಗಣಿಗಾರಿಕೆ, ಮರಳುಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಮರಳು ನೀತಿಯಲ್ಲಿ ಇವೆಲ್ಲವನ್ನು ಸೇರಿಸಿಕೊಳ್ಳಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ನಗರಕ್ಕೆ ಬಂದ ಕೂಡಲೇ ಉನ್ನತಾಧಿಕಾರಿಗಳ ಸಮಿತಿ ರಚನೆ ಆಗಲಿದೆ. ಅರ್ಕಾವತಿ ಮತ್ತೆ ಹರಿಯಲಿ. ಇದಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ
ಅರ್ಕಾವತಿ ನದಿ ಪುನಶ್ಚೇತನದಿಂದ ಬೆಂಗಳೂರಿಗೆ ನೀರು ದೊರೆಯುವುದು ಮಾತ್ರವಲ್ಲ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಗ್ರಾಮಗಳಲ್ಲಿ ಕೃಷಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಇದರಿಂದ ಪರಿಸರದಲ್ಲಿರುವ ಸಾವಿರಾರು ರೀತಿಯ ಜಲಚರ, ಪ್ರಾಣಿಪಕ್ಷಿಗಳಿಗೆ ಪ್ರಯೋಜನವಾಗುತ್ತದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಜನಜಾಗೃತಿಗೆ ಈ ಪಾದಯಾತ್ರೆ ನಡೆಸಲಾಯಿತು. ಅರ್ಕಾವತಿ ನದಿ ನಂದಿಬೆಟ್ಟಯಿಂದ ಹರಿದು ಹೆಸರಘಟ್ಟ ತುಂಬಿದರೆ, ಅಲ್ಲಿಂದ ನಂದಿಗೆ ಪಾದಯಾತ್ರೆ ಮಾಡುತ್ತೇನೆ. ಆ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. -ಎಸ್.ಆರ್. ವಿಶ್ವನಾಥ್, ಶಾಸಕ
ಅರ್ಕಾವತಿ ನದಿ ಹರಿದು ಹೆಸರಘಟ್ಟ ತುಂಬಿದರೆ, ಈಗಿರುವ ವ್ಯವಸ್ಥೆಯಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಕೂಡಲೇ ಕುಡಿಯುವ ನೀರು ನೀಡಬಹುದು. ಇದು ನನ್ನ ಕ್ಷೇತ್ರದ ಜನರ ಪಾಲಿನ ಜೀವಗಂಗೆ. ಈ ನದಿಯನ್ನು ಹರಿಸಿದರೆ, ಬೆಂಗಳೂರಿನ ಶೇ.25ರಷ್ಟು ಭಾಗಕ್ಕೆ ನೀರು ಕೊಡಬಹುದು. ಆದ್ದರಿಂದ ಈ ನದಿ ಪುನಶ್ಚೇತನಕ್ಕಾಗಿ ಸರ್ವಪ್ರಯತ್ನ ಮಾಡುತ್ತೇನೆ. -ಎಸ್. ಮುನಿರಾಜು, ಶಾಸಕ

ಯಾರು ಎಷ್ಟು ನಡೆದರು?
ಅರ್ಕಾವತಿ ಪುನಶ್ಚೇತನ ವೇದಿಕೆಯಡಿ ಆಯೋಜಿಸಲಾಗಿದ್ದ ಈ ಪಾದಯಾತ್ರೆ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ 106 ಕಿಮೀ ಹೆಜ್ಜೆ ಹಾಕಿತು. ಈ ಸಂಪೂರ್ಣ ನಾಲ್ಕು ದಿನ, ಒಂದು ನಿಮಿಷವೂ ವಾಹನ ಹತ್ತದೆ, ಸಂಪೂರ್ಣ ನಡಿಗೆಯಲ್ಲಿ ಪಾಲ್ಗೊಂಡಿದ್ದು ಶಾಸಕ ಎಸ್. ವಿಶ್ವನಾಥ್. ಪಾದಯಾತ್ರೆಯ ರೂವಾರಿ ಆಗಿದ್ದ ವಿಶ್ವನಾಥ್, ಭಾಷಣ ಮಾಡುವಾಗ ಮಾತ್ರ ಮೈಕ್‌ಗಾಗಿ ವಾಹನ ಹತ್ತಿದ್ದು ಬಿಟ್ಟರೆ, ಅಂತಿಮ ದಿನ ಬೆರಳ ಸಂದಿಯಲ್ಲಿ ರಕ್ತ ಸುರಿಯುತ್ತಿದ್ದರೂ 106 ಕಿಮೀ ದೂರವನ್ನು ನಡಿಗೆಯಲ್ಲೇ ಪೂರ್ಣಗೊಳಿಸಿದರು.
ವಿಶ್ವನಾಥ್ ಜತೆಗೆ ಪೂರ್ಣ ಪಾದಯಾತ್ರೆ ಸುಮಾರು 100 ಜನರು ಹೆಜ್ಜೆ ಹಾಕಿದರು. ಶಾಸಕ ಎಸ್. ಮುನಿರಾಜು ನಾಲ್ಕು ದಿನ ಬಹುತೇಕ (ಸುಮಾರು 80 ಕಿ.ಮೀ.) ಹೆಜ್ಜೆ ಹಾಕಿದರು. ನಾಗದಳ ತಂಡ ನಂದಿಬೆಟ್ಟದಿಂದ ದೊಡ್ಡಬಳ್ಳಾಪುರ (30 ಕಿಮೀ); ಪರಿಸರವಾದಿ ಮಹೇಶ್ ಭಟ್ 12 ಕಿಮೀ (ಹನಿಯೂರಿನಿಂದ ಹೆಸರಘಟ್ಟ); ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ತಂಡ 11 ಕಿಮೀ (ನಂದಿಬೆಟ್ಟದಿಂದ ಸೀಗೇಹಳ್ಳಿ ಗೇಟ್); ಸಚಿವ ಸುರೇಶ್ ಕುಮಾರ್ 8 ಕಿಮೀ (ನಂದಿಬೆಟ್ಟದಿಂದ ಕ್ರಾಸ್‌ವರೆಗೆ); ಸಚಿವ ಆರ್ ಅಶೋಕ್ 7 ಕಿಮೀ (ತರಬನಹಳ್ಳಿಯಿಂದ ರೈಲ್ವೆ ಸೇತುವೆ ಹೊಳೆ ಹಾಗೂ ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಸಚಿವ ರಾಮಚಂದ್ರಗೌಡ 6 ಕಿಮೀ (ರಾವುತ್ತನಹಳ್ಳಿಯಿಂದ ಸೊಂಡೆಕೊಪ್ಪ); ಶಾಸಕ ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ವೀರಾಪುರದವರೆಗೆ (ಸುಮಾರು 6 ಕಿಮೀ), ಸಂಸದ ಅನಂತಕುಮಾರ‍್, ಶಾಸಕರಾದ ರವಿಸುಬ್ರಹ್ಮಣ್ಯ ಹಾಗೂ ವಿಜಯಕುಮಾರ್ 5 ಕಿಮೀ (ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಶಾಸಕ ನಾಗರಾಜ್ 4 ಕಿಮೀ(ಸೊಂಡೆಕೊಪ್ಪದ ಸಮೀಪದಲ್ಲಿ). ಇವರಲ್ಲದೆ, ಯಲಹಂಕ, ದಾಸರಹಳ್ಳಿಯ ಮುಖಂಡರು ಹಾಗೂ ನೂರಾರು ಜನರು ದಿನಕ್ಕೆ ಹತ್ತಾರು ಕಿಮೀ ದೂರ ಪಾದಯಾತ್ರೆಯಲ್ಲಿ ಸಾಗಿದರು.

ಇತಿಹಾಸ ರಚನೆ
ಅರ್ಕಾವತಿ ನದಿ ಪುನಶ್ಚೇತನಕ್ಕೆ ಜನಪ್ರತಿನಿಧಿಗಳನ್ನು ಒಳಗೊಂಡ ನಾಲ್ಕು ದಿನಗಳ ಪಾದಯಾತ್ರೆ ಹೊಸ ಇತಿಹಾಸ ರಚಿಸಿತು. ನದಿ ಪುನಶ್ಚೇತನ ಹಾಗೂ ಸಂರಕ್ಷಣೆ ಬಗ್ಗೆ ಜನಜಾಗೃತಿಯ ಮೂಲ ಉದ್ದೇಶವನ್ನು ಹೊಂದಿದ್ದ ಪಾದಯಾತ್ರೆ, ಪಕ್ಷಾತೀತವಾಗಿ ಹೆಜ್ಜೆಹಾಕಿತ್ತು. ಸಚಿವರು ಹಾಗೂ ಶಾಸಕರು ಸೇರಿದಂತೆ ಪರಿಸರವಾದಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಮಹೇಶ್ ಭಟ್, ಸೀತಾರಾಂ, ಶಿವಮಲ್ಲು, ಕೆ.ಸಿ. ಶಿವರಾಂ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಅರ್ಕಾವತಿ ಪುನಶ್ಚೇತನ ಸಮಿತಿ, ನಾಗದಳ, ಕುಮುದ್ವತಿ ನೆಲ-ಜಲ ರಕ್ಷಣಾ ಸಮಿತಿ, ಅರ್ಕಾವತಿ ಜನಜಾಗೃತಿ ಸಮಿತಿ, ಜನಧ್ವನಿ, ಕರ್ನಾಟಕ ಸುರಕ್ಷಾ ಸೇನಾಪಡೆ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆಯ ಸಂದರ್ಭದಲ್ಲಿ ಮೂರು ದಿನ ಸುಗಮಸಂಗೀತದ ದಿಗ್ಗಜರಾದ ಡಾ. ಸಿ. ಅಶ್ವತ್ಥ್, ಡಾ. ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ತಂಡ ಪರಿಸರ ಗೀತೆಗಳ ಸುಧೆಹರಿಸಿ, ಪರಿಸರ-ನದಿ ಉಳಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಸಾರಿದ್ದು ಗಮನಾರ್ಹವಾಗಿತ್ತು.
ಈ ಹಿಂದೆ, 2007ರ ಜನವರಿಯಲ್ಲಿ ಹಲವು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಸೇರಿಕೊಂಡು ಕೆ.ಸಿ. ಶಿವರಾಂ ಸಂಘಟನೆಯಲ್ಲಿ ನಂದಿಬೆಟ್ಟದಿಂದ ಕನಕಪುರದ ಸಂಗಮದವರೆಗೆ 190 ಕಿಮೀ ದೂರವನ್ನು ಒಂಬತ್ತು ದಿನದಲ್ಲಿ ಪಾದಯಾತ್ರೆ ಮೂಲಕ ಕ್ರಮಿಸಿದ್ದರು.

No comments:

Post a Comment