Tuesday, September 8, 2009

ಎರಡನೇ ದಿನ ಮುಗಿಲು ಮುಟ್ಟಿದ ಉತ್ಸಾಹ

ಅರ್ಕಾವತಿ ಪಾದಯಾತ್ರೆ-ದಿನ-2: ಸೆಪ್ಟೆಂಬರ್ 4, 2009
ಹಳ್ಳಿಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಅಲ್ಲಿನ ಬೀದಿಗಳಲ್ಲಿ ಸ್ವಾಗತ ಸಭೆ, ಮನವಿ ಮಾಡುವುದು ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮಾತ್ರ. ಆದರೆ, ಶುಕ್ರವಾರ ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ತಾಲೂಕು ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿತ್ತು
ಈ ತಾಲೂಕುಗಳಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಮುಖಂಡರ ಜಾತ್ರೆಯೇ ನಡೆದಿತ್ತು. ಆದರೆ ಇದು ಚುನಾವಣೆ ಪ್ರಚಾರ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನ ಉತ್ಸಾಹವೂ ಇತ್ತು. ಏಕೆಂದರೆ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಅರ್ಕಾವತಿ ನದಿ ಸಂರಕ್ಷಣೆಗೆ ಮನವಿ ಮಾಡುತ್ತಿದ್ದರು. ಅದರ ಅಗತ್ಯವನ್ನು ತಿಳಿಹೇಳಿದರು.
ಅರ್ಕಾವತಿ ನದಿ ಪುನಶ್ಚೇತನ ಹಾಗೂ ಸಂರಕ್ಷಣೆಯ ಜನಜಾಗೃತಿ ಪಾದಯಾತ್ರೆಗೆ ಶುಕ್ರವಾರ ವಿಭಿನ್ನ ರಂಗೇರಿತ್ತು. ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಅಷ್ಟೇಅಲ್ಲ, ಪಾದಯಾತ್ರಿಗಳ ಸಂಖ್ಯೆಯೂ ವೃದ್ದಿಸುತ್ತಾ ಹೋಯಿತು.
ಪಾದಯಾತ್ರೆಯ ಎರಡನೇ ದಿನ ದೊಡ್ಡಬಳ್ಳಾಪುರದ ಬಸವಭವನದಿಂದ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಆರಂಭವಾಯಿತು. ಅಲ್ಲಿಂದ ನಾಗರಕೆರೆ, ವೀರಾಪುರ, ಮಜರಾ ಹೊಸಹಳ್ಳಿ ಮೂಲಕ ಹನಿಯೂರು ಪ್ರವೇಶಿಸಿ, ಹೆಸರಘಟ್ಟ ತಲುಪಿತು.
ದೊಡ್ಡಬಳ್ಳಾಪುರದಲ್ಲಿ ಒಂದಷ್ಟು ದೂರ ಶಾಸಕ ನರಸಿಂಹಸ್ವಾಮಿ ಹೆಜ್ಜೆ ಹಾಕಿದರು. ನಾಗರಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ತಾವು ಬದ್ಧ ಎಂದು ಹೇಳಿದ್ದು ಗಮನಾರ್ಹವಾಗಿತ್ತ. ಈ ಕೆರೆ ಉಳಿವಿಗಾಗಿ ನಾಗದಳ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದೆ.
ಹನಿಯೂರು ತಲುಪಿದಾಗಲೇ ಪಾದಯಾತ್ರೆಗೆ ವಿಭಿನ್ನ ರೂಪ ದೊರೆತತ್ತು. ಪಾದಯಾತ್ರೆ ಹನಿಯೂರಿಗೆ ಆಗಮಿಸಿದಾಗ, ಮಾವಿನ ತೋರಣ, ಪೂರ್ಣಕುಂಭಗಳ ಮೂಲಕ ಹೂವಿನ ಮಳೆಯಲ್ಲಿ ಸ್ವಾಗತ ಕೋರಲಾಯಿತು. ಪರಿಸರವಾದಿ, ಕಲಾವಿದ ಸುರೇಶ್ ಹೆಬ್ಳೀಕರ್, ಶಾಸಕ ಎಸ್. ಮುನಿರಾಜು, ವಾಣಿಶ್ರೀ ವಿಶ್ವನಾಥ್, ಅರ್ಕಾವತಿ-ಕುಮುದ್ವತಿ ಪುನಶ್ಚೇತನ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಇಲ್ಲಿ ಪಾದಯಾತ್ರೆಗೆ ಸೇರಿಕೊಂಡರು. ವಿಶ್ವನಾಥ್ ಇವರೆಲ್ಲರೊಂದಿಗೆ ಸೇರಿಕೊಂಡು ಹನಿಯೂರು ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದರು.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಪಾದಯಾತ್ರೆಗೆ ಅತ್ಯದ್ಭುತ ಸ್ವಾಗತ, ಪ್ರಶಂಸೆ ಹಾಗೂ ಭಾಗವಹಿಸುವಿಕೆ ಕಂಡುಬಂದಿತು. ಸಂಜೆ ಹೆಸರಘಟ್ಟ ಜಲಾಶಯದ ಹಿನ್ನೆಲೆಯಲ್ಲಿ, ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ಹಿರಿಯ ಗಾಯಕ ಡಾ. ಅಶ್ವತ್ಥ್ ಅವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.

ಏನೆಂದರು?
ನದಿ ಪುನಶ್ಚೇತನಕ್ಕೆ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪಕ್ಷದವರು ಜತೆಗೂಡಿರುವುದು ರಾಷ್ಟ್ರದಲ್ಲೇ ಇದು ಪ್ರಥಮ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆ ರಾಜ್ಯಕ್ಕೇ ಮಾದರಿ. -ಸುರೇಶ್ ಹೆಬ್ಳೀಕರ್, ಕಲಾವಿದ, ಪರಿಸರವಾದಿ
ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ಕೆ ನಾನು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಸದ್ಯ ನಡೆಯುತ್ತಿರುವ ಪಾದಯಾತ್ರೆಗೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂಧನೆ ಸಿಗದಿದ್ದರೆ, ಲಕ್ಷಾಂತರ ಜನರೊಂದಿಗೆ ವಿಧಾನಸೌಧಕ್ಕೆ ತೆರಳಿ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಅರ್ಕಾವತಿ ಉಳಿವಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. -ಡಾ. ಸಿ. ಅಶ್ವತ್ಥ್, ಹಿರಿಯ ಗಾಯಕರು.

ಪಾದಯಾತ್ರೆ ಹೆಜ್ಜೆಗಳು- ದಿನ-2
ಬೆಳಗ್ಗೆ 7.15: ದೊಡ್ಡಬಳ್ಳಾಪುರದ ಬಸವಭವನದಿಂದ ಪ್ರಾರಂಭವಾಗಿ, ನಾಗರಕೆರೆಏರಿ ಮೂಲಕ ರೈಲು ನಿಲ್ದಾಣ.
9.15: ಬಾಶೆಟ್ಟಿಹಳ್ಳಿ ಸ್ಥಳೀಯರಿಂದ ಸ್ವಾಗತ. ವೀರಾಪುರಕ್ಕೆ ಪ್ರವೇಶ.
10.30: ವೀರಾಪುರದ ಆಂಜನೇಯ ದೇವಾಲಯದಲ್ಲಿ ಪೂಜೆ ಮತ್ತು ಜನಜಾಗೃತಿ ಸಭೆ.
11.05: ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರಿಗೆ ಪ್ರವೇಶ. ತಮಟೆ ಮೂಲಕ ಸ್ವಾಗತ. ಗ್ರಾ.ಪಂ. ಗ್ರಂಥಾಲಯದಲ್ಲಿ ಸಭೆ. ಕೆರೆ ಒತ್ತುವರಿ ತೆರವಿಗೆ ಪಣ.
1 ಗಂಟೆ: ಹನಿಯೂರಿನಲ್ಲಿ ಅದ್ಧೂರಿ ಸ್ವಾಗತ. ಪೂರ್ಣಕುಂಭ, ಹಸಿರುತೋರಣ ಹಾಗೂ ಪಟಾಕಿ ಮೂಲಕ ಸ್ವಾಗತ. ಹನಿಯೂರು ಕೆರೆಯಲ್ಲಿ ಗಂಗಾಪೂಜೆ.
3.45: ಸೊಣ್ಣೇನಹಳ್ಳಿ ಕ್ರಾಸ್‌ಗೆ ಆಗಮನ. ಜನಜಾಗೃತಿ ಸಭೆ. ನಂತರ ಸೀಡ್ ಫಾರ್ಮ್ ಮೂಲಕ ಬ್ಯಾತಕೆರೆ ಮೂಲಕ ಹೆಸರಘಟ್ಟ ಜಲಾಶಯಕ್ಕೆ ಆಗಮನ.
ಸಂಜೆ 6 ಗಂಟೆಗೆ ಡಾ. ಅಶ್ವತ್ಥ್ ಅವರಿಂದ ಸುಗಮಸಂಗೀತ.

No comments:

Post a Comment